ಒಳ್ಳೆಯವರಿಗೆ ಕಾಲ ಈ ಲೋಕದೊಳಗೆ ಇಲ್ಲ
ತುಂಬಿ ತುಳುಕುತಿದೆಯಲ್ಲ ಕೆಟ್ಟ ಹುಳಗಳ ಜಾಲ..
ಹೊತ್ತಿ ಉರಿಯುತಿದೆಯಲ್ಲ ಪಾಪಿಗಳ ಜ್ವಾಲ
ಸುಟ್ಟು ಭಸ್ಮವಾಯಿತಲ್ಲ ಮನುಷ್ಯ ಧರ್ಮವೆಲ್ಲ..
ಬೇಡು ಕೊಂಡ್ರೆ ಯಾವ ಕೆಲಸ ನಡೆಯೋದಿಲ್ಲ
ದುಡ್ಡು ಕೊಟ್ರೆ ಎಂಥ ಕೆಲಸನೂ ನಿಲ್ಲೋದಿಲ್ಲ..
ಹೆಗ್ಗಣಗಳಂತೆ ಮಾಡಿಕೊಂಡವ್ರೆ ರಾಶಿ ರಾಶಿ ಬಿಲ
ತಲೆತಲಾಂತರಗಳು ಮುಕ್ಕುವಷ್ಟು ತುಂಬಿ ಇಡುವರಲ್ಲ..
ಎಲ್ಲೆಲ್ಲೂ ಕಟ್ಟಿಕೊಂಡವ್ರೆ ದೊಡ್ಡ ದೊಡ್ಡ ಕುಳಗಳ ಬಲ
ನ್ಯಾಯ ದೇವತೆಗೂ ಮಣ್ಣು ಮುಕ್ಕಿಸಿ ಮೆರಿತಾರಲ್ಲ..
ಗುಣವನ್ನು ಮಖಾಡೆ ಮಲಗಿಸಿದರಲ್ಲ
ಹಣವನ್ನು ಗುಡಿಸಿ ಗುಂಡಾಂತರ ಮಾಡಿದರಲ್ಲ..
ನಾವು ನಮ್ಮವರು ಅನ್ನೋದೆಲ್ಲ ನುಚ್ಚು ನೂರಾಗಿ ಮಣ್ಣು ಸೇರಿತಲ್ಲ..
ಪೊಳ್ಳು ಮಾತಾನಾಡಿ ಅರಮನೆ ಆಳುವರಲ್ಲ
ನೆರಳು ಇಲ್ಲದವರಿಗೆ ಸಣ್ಣ ಸೂರು ನೀಡಲಿಲ್ಲ..
ದೇಶದ ಕಥೆ ಕಿಂಚಿತ್ತೂ ಕೇಳೋದಿಲ್ಲ
ವೇಷ ಹಾಕ್ಕೊಂಡು ಮನುಷ್ಯರನ್ನ ಕಿತ್ತು ತಿನ್ತಾರಲ್ಲ..
ನೊಂದು ಬೆಂದವರಿಗೆ ಸಾಲ ಮರಣ ತಪ್ಪಲಿಲ್ಲ
ನುಂಗಿ ನೀರು ಕುಡಿವವರ ಕಪಟನಾಟಕ ನಿಲ್ಲಲಿಲ್ಲ.
ಅಧಿಕಾರ ದಾಹಕ್ಕಾಗಿ ಹೆಣಗಳ ಸಂತೆ ಮಾಡ್ತಾರಲ್ಲ
ಹೆಣ್ಣಿನ ಮೋಹಕ್ಕಾಗಿ ಸುಳ್ಳಿನ ಕಂತೆ ಕಟ್ತಾರಲ್ಲ..
ದೇವರು ದಿಂಡ್ರು ಅಂದ್ರೆ ಚಿನ್ನದ ಕಾಣಿಕೆ ನೀಡ್ತಾರಲ್ಲ
ಕೂಳು ಇಲ್ಲದೆ ನರಳುವವರಿಗೆ ಅನ್ನ ಕೊಡದೆ ಸಾಯಿಸ್ತಾರಲ್ಲ..
ದ್ವೇಷ ಮೋಸದ ಬೆಂಕಿ ಆರಿಸುವವರು ಯಾರು ಇಲ್ಲ
ಪ್ರೀತಿ ಸ್ನೇಹದ ಕಿಡಿ ಹೊತ್ತಿಸುವವರು ಎಲ್ಲೂ ಇಲ್ಲ..
ಕಂಡೆವು ಜೀವನದಲಿ ಬಣ್ಣ ಹಲವು
ಇರುವುದು ಬಣ್ಣ ಮೂರು ನಮ್ಮ ಧ್ವಜದಿ
ಕಲಿಸಿದೆ ಶಾಂತಿ ಸಹನೆ ಬಳಿಯು
ಧೈರ್ಯವನು ಕೇಸರಿ
ಅಭಿವೃದ್ಧಿಯನು ಹಸಿರು
ನಮ್ಮ ಜೀವನದಲ್ಲಿದ್ದರೆ ಈ ಬಣ್ಣಗಳು
ಸುಂದರ ಸಮೃದ್ಧವಾಗುವುದು ಜೀವನ
ಏಳು ಬಣ್ಣದ ಕಾಮನಬಿಲ್ಲು ನೋಡಲು ಚಂದ
ಇರುವುದು ಹಲವು ಕಷ್ಟಗಳು ಜೀವನದಲಿ
ಜಯಿಸಿ ನಡೆದರೆ ನಮ್ಮ ಬದುಕು ಸುಂದರ
ಬಣ್ಣದ ಹಬ್ಬದ ಶುಭಾಶಯಗಳು
ಸಿರಿಗೇರಿಯ ನೀರಲ್ಲಿ
ಮಿಂದಾಕೆ ನನ್ನವಳು.!
ಚಂದಿರನ ಹೋಲುವ
ಅಂದದ ಮೊಗದವಳು.!
ಪ್ರಕೃತಿಯ ಸಿರಿಯೆನ್ನೇ
ಕೇಶಕ್ಕೆ ಎರೆದವಳು.!
ಚುಕ್ಕಿಗಳನೇ ಕಿತ್ತು
ಹೂ ಮಾಡಿ ಮುಡಿದವಳು.!
ತೆಳುವಾದ ಹುಬ್ಬಲ್ಲೇ
ಕಣ್ಸನ್ನೆ ಮಾಡಿಹಳು.!
ಆ ಗಿಣಿಯಂತ ಮೂಗಲ್ಲಿ
ನತ್ತನ್ನು ಇಟ್ಟಿಹಳು..!
ನುಡಿಯುತಿರೆ ಮಾತು
ಕೋಗಿಲೆಯ ಧ್ವನಿಯವಳು.!
ನಡೆಯುತಿರೆ ಅವಳು
ಹಂಸದಂತೆ ಬಳುಕುವಳು.!
ಶರಣಾದವು ಅವಳಿಗೆ
ಮಳೆಬಿಲ್ಲ ಬಣ್ಣಗಳು..!
ಮುಡಿಪಾದವು ನಾನು
ಬರೆದಿರುವ ಕವನಗಳು..!