ಮನಸಿಗೆ ಬೇಕಿದೆ ಮಜ್ಜನ !
ಎಲ್ಲವನೂ ಬಿಟ್ಟು ನಿಂತ ಮಹಾ ಮಹಿಮಗೆ
ಮಾಡುವರಯ್ಯ ಮಹಾ ಮಜ್ಜನವ
ರಾಜ್ಯವನೆ ತೊರೆದವಗೆ ರಾಜ್ಯಾಡಳಿತವೇ
ರಾಶಿ ರಾಶಿ ಹಾಲ್ಬೆಣ್ಣೆ ತುಪ್ಪವ ತಂದು ಸುರಿಯುವುದನ್ನು ಕಂಡು,
ಕನಲಿರಬಹುದೇ ಆ ಮಹಾತ್ಮನಾತ್ಮ ?
ಹೊಟ್ಟೆಗಿಲ್ಲದೇ ಸಾಯುತಿಹರು ದೀನರು,
ಸಾಲದ ಸುಳಿಯಲ್ಲಿ ಸತ್ತರು ಬಡ ರೈತರು
ಪೋಷಕಾಂಶಗಳಿಲ್ಲದೆ ನರಳುವ ಮಕ್ಕಳು
ದಿಗಂಬರನ ಮೇಲೆ ಬೆಣ್ಣೆ ತುಪ್ಪ ತಂದು ಸುರಿವರು!
ಮೂಡ ಮತಿಗಳ ನಡುವಲ್ಲಿ ಮರೆಯಾಯ್ತು
ಮಾನವೀಯತೆ, ಅದೆಲ್ಲೋ ಮರೀಚಿಕೆ..
ಬಂಗಾರ ತೊಡುವ ದೇವರು,
ಗರ್ಭ ಗುಡಿಗೆ ಕನ್ನ ಹಾಕುವ ಮನುಜರು
ಗರ್ಭದಲಿ ಹೊತ್ತು ಹೆತ್ತವಳನ್ನೇ ಬುರ್ಕಾದೊಳು
ಮುಚ್ಚಿಡುವ ಮಂದ ಮತಿಗಳಿವರು.
ಏನ ಬಳಿಯುವಿರಣ್ಣ
ಚರ್ಚಿನ ಗೋಡೆಗೆ ಬಿಳಿ ಬಣ್ಣ,
ಸಂಪತ್ತು ತುಂಬಿರುವ ದೇಶದಲ್ಲಿ ಮಕ್ಕಳೇ
ಆಗಿರುವರು ಪ್ರಾಣ ತೆಗೆವ ಆಪತ್ತು!
ಹೊಟ್ಟೆ ಪಾಡಿಗೆ ಹುಟ್ಟಿಕೊಂಡ ದೇವನ
ಹೆಸರಲ್ಲಿ ಬಿದ್ದ ಹೆಣಗಳಿಗೆ ಲೆಕ್ಕವನಿಟ್ಟವರಾರು ?
ಮನುಷ ಮನುಷ್ಯನ ಕೊಲ್ವದೆ ಧರ್ಮವೆಂದು
ಬರೆದು ಸತ್ತ ದುರಾತ್ಮರುಗಳ್ಯಾರು?
ತುಪ್ಪ ಸುರಿವದು ನಿಲ್ಲಿಸಿ,
ಎಂದೋ ಸತ್ತರೂ ಬದುಕಿರುವ ಮಹಾ ಮಹಿಮನ
ಮತ್ತೆ ಮತ್ತೆ ಕೊಲ್ಲದಿರಿ,
ಅವನ ತತ್ವಗಳ ಕೊರಳು ಹಿಸುಕುತ್ತ
ಬೆಣ್ಣೆ ತುಪ್ಪಗಳ ವ್ಯರ್ಥವಾಗಿ ಕಗ್ಗಲ್ಲ ಮೇಲೆ ಸುರಿದು !
- ಶ್ರೀಗೋ.
20 Feb 2018, 09:40 pm
Download App from Playstore: