ಸತ್ತಾಗ ಎಲ್ಲಾ ಹೊತ್ತುಕೊಂಡು ಹೋಗ್ತಿಯೇನಯ್ಯ

ಯಾಕೆ ದುಡ್ಡು ದುಡ್ಡು ಅಂತ ಸಾಯ್ತಿಯಾ
ಸತ್ತಾಗ ಎಲ್ಲಾ ಹೊತ್ತುಕೊಂಡು ಹೋಗ್ತಿಯೇನಯ್ಯ..
ಮಣ್ಣಿನೊಳಗೆ ಸಂಪತ್ತು ದುಡ್ಡು ಇಟ್ಟು ಮುಚ್ಚುವರೇನಯ್ಯ..
ಅಧಿಕಾರ ಅಹಂಕಾರ ಬಂಗಾರ ಬಡಿವಾರ
ಏಕಯ್ಯ..
ಲೋಕದೊಳಗೆ ನಾಲ್ಕು ಜನ ಮೆಚ್ಚುವಂತೆ
ಬಾಳಬೇಕಯ್ಯ.. " ಪ "

ಹುಟ್ಟು ಪಡೆದ ಮೇಲೆ
ಸಾವು ಬರಲೇಬೇಕಯ್ಯ...
ಅಡ್ಡದಾರಿ ತುಳಿದ ಮೇಲೆ
ತಲೆದಂಡ ಕಟ್ಟಲೇ ಬೇಕಯ್ಯ..
ದುರಾಸೆ ಎಂಬ ಭೂತ ಹಿಡಿದ ಮೇಲೆ
ಸಂತಸ ಎಂಬ ಸ್ನೇಹಿತ ನಿನಗೆ ಸಿಗೋದಿಲ್ಲಯ್ಯ..
ನಾನು ಎಂಬ ಜಂಭ ನೆತ್ತಿಗೇರಿದ ಮೇಲೆ
ನಗು ಎಂಬ ಹಬ್ಬ ನಿನ್ನ ಬಾಳಿಗೆ ಇಲ್ಲಯ್ಯ..
ಅನ್ಯರ ಕಾಸಿಗೆ ಕನ್ನ ಹಾಕಿದ ಮೇಲೆ
ಪುಣ್ಯದ ಜೋಳಿಗೆ ನಿನ್ನ ಜೊತೆಗೆ ಬರೋದಿಲ್ಲಯ್ಯ

ಮಾನವನಾಗಿ ಹುಟ್ಟಿದ ಮೇಲೆ
ಸಕಲ ಪ್ರಾಣಿಗಳಲ್ಲಿ ದಯೆ ಇರಬೇಕಯ್ಯ..
ಬದುಕಿನ ಬಂಡಿ ಏರಿದ ಮೇಲೆ
ಶಾಂತಿ ಸಹನೆಯ ದಾರಿ ಹಿಡಿಯಬೇಕಯ್ಯ..
ಮೇಲುಕೀಳು ಅನ್ನದೆ ನಗುತ ಬಾಳಿದ ಮೇಲೆ
ಎಲ್ಲೆಲ್ಲೂ ನಿನಗೆ ಭಗವಂತ ಕಾಣುವನಯ್ಯ..
ನಾಡು ಹೋಗು ಅನ್ನುವ ಮೊದಲೇ
ಪ್ರೀತಿಸ್ನೇಹದ ಕೋಟೆ ಕಟ್ಟಿ ಹೋಗಬೇಕಯ್ಯ..
ಕಾಡು ಬಾ ಎಂದು ಕರೆಯುವ ಮೊದಲೇ
ದ್ವೇಷ ಮೋಸದ ಮೂಟೆ ಸುಟ್ಟು ಹಾಕಬೇಕಯ್ಯ..

- ಸುರೇಶ್ ಟಿ ವಿ

24 Feb 2018, 09:43 am
Download App from Playstore: