ಸತ್ತ ಮಾನವೀಯತೆ!
ಎಷ್ಟೊಳ್ಳೆಯ ಕೆಲಸ ಮಾಡಿದಿರಿ
ದೇವರ ಸ್ವಂತ ನಾಡಿನ ನಾಗರಿಕ-
ರೆಂದೆನಿಸಿಕೊಂಡ ಅನಾಗರಿಕ ಜನಗಳೇ.
ಹಸಿವಲ್ಲಿ ಕದ್ದವನ ಹೊಡೆದು ಕೊಂದು
ಹಲ್ಲು ಕಿಸಿದು ಪಟ ತೆಗೆದುಕೊಂಡು!
ಸಾಯಿಸಿದ್ದು ಒಳ್ಳೆಯದೇ ಆಯ್ತು ಬಿಡಿ
ಹೊಟ್ಟೆ ತುಂಬಿರುವ ವಿಷ ಜಂತುಗಳ
ನಡುವಲ್ಲಿ ಕದ್ದು ತಿನ್ನುವ ಅಬ್ವೆಪಾರಿ
ಬದುಕಿದ್ದು ಸಾಧಿಸುವುದಾದರೂ ಏನು?
ತುತ್ತು ಕೊಡದ ತುಸು ಕರುಣೆ ಇಲ್ಲದ
ಕಟುಕರ ಅನ್ನಕ್ಕೆ ಕೈ ಹಾಕಿದ್ದೆ ಅವ
ಮಾಡಿದ ಮಹಾಪರಾಧ!
ದೇವರ ಹೆಸರಲ್ಲಿ ರಾಶಿ ರಾಶಿ ಹಾಲು ಬೆಣ್ಣೆ
ಕೊಂಡೊಯ್ದು ಕಲ್ಲ ಮೇಲೆ ಸುರಿವ
ಕಲ್ಲು ಹೃದಯದ ಮೂಡ ಜನಗಳಿಗೆ
ಎಲ್ಲಿಂದ ತಿಳಿಯಬೇಕು ಹಸಿದ ಹೊಟ್ಟೆಯ ನೋವು.
ಕೋಟಿ ಕೋಟಿ ಮೂಟೆ ಕಟ್ಟಿ ವಿದೇಶಕ್ಕೆ
ಹಾರುತಿಹರು ಸೂಟು ಬೂಟಿನ ಮಂದಿ.
ಮಣ ಭಾರದ ಬಂಗಾರ ಹೊತ್ತು ತಿರುಗುವ
ಮಾನಗೆಟ್ಟ ಸಿರಿವಂತಿಕೆಯ ಮಂಗಳೆಯರು.
ನಿಮ್ಮ ಸಿರಿವಂತಿಕೆಯ ಅಣು ಅಣುವಿನಲ್ಲೂ
ಅಡಗಿಹುದು ಯಾವುದೋ ಬಡವನ ಬೆವರು.
ತುತ್ತು ಕದ್ದವನು ಕಳ್ಳನಲ್ಲ,
ಸುಳ್ಳು ಹೇಳಿ, ಜನರ ವಂಚಿಸಿ ಬದುಕುವ
ರಾಜಕಾರಣಿಗಳು, ಜೊತೆಗೆ ಅಧಿಕಾರಿಗಳು
ಇವರಲ್ಲವೇ ಕಳ್ಳರು? ದೇಶ ಲೂಟಿ ಮಾಡುವ
ದೇಶದ್ರೋಹಿ ಉದ್ಯಮಿಗಳ ಯಾಕೆ
ಯಾರೂ ಬಡಿದು ಕೊಲ್ಲಲೊಲ್ಲರು ?
- ಶ್ರೀಗೋ.
26 Feb 2018, 07:24 am
Download App from Playstore: