ವೀರ ಕನ್ನಡಿಗ

ಬಾರೋ ಬಾರೋ ವೀರ ಕನ್ನಡಿಗ ಬಾರೋ
ಕನ್ನಡ ನೆಲಜಲ ರಕ್ಷಿಸಲು ಮುನ್ನುಗ್ಗಿ ಬಾರೋ..
ಬಾರೋ ಬಾರೋ ಧೀರ ಕನ್ನಡಿಗ ಬಾರೋ
ಕನ್ನಡ ನಾಡುನುಡಿ ಬೆಳೆಸಲು ಧುಮುಕಿ ಬಾರೋ..
ಸಿರಿಗನ್ನಡ ಗೆಲ್ಲಬೇಕು
ಸಿರಿಗನ್ನಡ ಬಾಳಬೇಕು.." ಪ "

ನೀ ಉಸಿರಾಡೋ ಗಾಳಿ ಕನ್ನಡ
ನೀ ತಿನ್ನೋ ಅನ್ನ ಕನ್ನಡ..
ನೀ ಕುಡಿಯೋ ನೀರು ಕನ್ನಡ
ನೀ ಬದುಕೋ ಊರು ಕನ್ನಡ..
ಮಾತೃಭೂಮಿಗಾಗಿ ಪ್ರಾಣ ನೀಡಲು ಸಿದ್ಧನಾಗೋ
ಪುಣ್ಯಭೂಮಿಯ ಋಣ ತೀರಿಸಲು ಬದ್ಧನಾಗೋ

ಓ ಕನ್ನಡಿಗ ..ಹೇ ಕನ್ನಡಿಗ..
ಕೃಷ್ಣ ಕಾವೇರಿ ನದಿ ಜಲಪಾತಗಳು
ಕನ್ನಡ ಡಿಂಡಿಮ ಬಾರಿಸುತ ಸಾಗುವ ಕನ್ನಡಾಂಬೆಯ ತೇರುಗಳು..
ಮಲೆನಾಡಿನ ಮನೋಹರ ಗಿರಿಶಿಖರಗಳು
ಕನ್ನಡ ಕಂಪನು ಚೆಲ್ಲುವ ಕೀರ್ತಿ ಪತಾಕೆಗಳು..
ಬೇಲೂರು ಹಂಪೆಯ ಗುಡಿ ಗೋಪುರಗಳು
ಕನ್ನಡಾಂಬೆಯ ವೈಭವ ಸಾರುವ ಕೀರ್ತಿ ಕಳಶಗಳು
ನಗುತ ನಿಂತ ನೂರಾರು ಶಿಲಾಶಾಸನಗಳು
ಸಾಹಸಗಾಥೆ ಸಾರುವ ಸಿರಿಗನ್ನಡದ ಸತ್ಯ ಪೀಠಗಳು

ಕನ್ನಡ ಮಣ್ಣಿನ ಕಣಕಣಗಳು
ಕರುಣೆ ಬಿತ್ತುವ ಕನ್ನಡಿಗರ ಹೊನ್ನಿನ ಮನಗಳು..
ಕನ್ನಡ ಕವಿಪುಂಗವರು,ಕನ್ನಡ ಗಾನಕೋಗಿಲೆಗಳು
ಕನ್ನಡಾಭಿಮಾನ ಹರಿಸುವ ಕನ್ನಡಾಂಬೆಯ ಜ್ಯೋತಿಗಳು..
ಕದನಕೆ ಅಳುಕದೆ ನಾಡನು ಕಟ್ಟಲು
ಹೋರಾಡಿದರು ಕನ್ನಡದ ರಾಜಮಹಾರಾಜರುಗಳು..
ಮರಣಕೆ ಅಂಜದೆ ನಾಡನು ರಕ್ಷಿಸಲು
ವೀರಮರಣವಾದರು ಕನ್ನಡದ ವೀರಾಧಿವೀರರುಗಳು.." "

ಓ ಕನ್ನಡಿಗ ಕನ್ನಡಕ್ಕಾಗಿ ನೀ ಎಚ್ಚರಗೊಳ್ಳು
ಓ ಕನ್ನಡಿಗ ಕನ್ನಡಕ್ಕಾಗಿ ನೀ ಸ್ಫೂರ್ತಿಗೊಳ್ಳು..
ನುಗ್ಗಿ ಬರಲಿ ನಾಡಿನೊಳಗೆ ಸಾವಿರ ಭಾಷೆಗಳು
ನರನಾಡಿಯಲ್ಲಿ ಭೋರ್ಗರೆಯಲಿ ಕನ್ನಡಾಭಿಮಾನದ ಸಾಗರಗಳು..
ಕನ್ನಡವೇ ನಿನ್ನ ಮಂತ್ರವಾಗಬೇಕು
ಕನ್ನಡವೇ ನಿನ್ನ ಅಸ್ತ್ರವಾಗಬೇಕು..
ಕನ್ನಡಾಭಿಮಾನಿಗಳಿಗೆ ನೀ ಮಾಡು ಕೋಟಿ ವಂದನೆ
ಕನ್ನಡ ದುರಾಭಿಮಾನಿಗಳಿಗೆ ನೀ ಕೊಡು ಚಾಟಿ ದಂಡನೆ..
ಕನ್ನಡ ಝೇಂಕಾರ ಮೊಳಗಲಿ ಯುಗಯುಗಗಳು
ಕನ್ನಡಿಗರ ಬಾಳು ಬಂಗಾರವಾಗಲಿ ಪ್ರತಿಕ್ಷಣಗಳು..

- ಸುರೇಶ್ ಟಿ ವಿ

27 Feb 2018, 08:53 am
Download App from Playstore: