ಯುಗಾದಿ ಹಬ್ಬ
ಆರಂಭ ನವಯುಗದ ಶುಭಾರಂಭ
ವಸಂತನೆಂಬ ಋತು ದೈವ ಧರೆಗಿಳಿದ ಸಂದರ್ಭ..
ಅಬ್ಬಬ್ಬಾ ಎಂಥ ಜೀವಕಳೆ ಜಗದ ತುಂಬ
ಚೈತ್ರನೆಂಬ ಋತುರಾಜ ಧರೆಗೆ ಮುತ್ತಿಟ್ಟ ಸಂದರ್ಭ.
ಗಿಡ ಮರಗಳ ತುಂಬ
ಹಸಿರು ಬೆಳಕಿನ ಹಬ್ಬ..
ಮನೆ ಮನಗಳ ತುಂಬ
ಹೊಸ ವರ್ಷದ ಹಬ್ಬ.. " ಪ "
ಕೂಹೂ ಕೂಹೂ ಎಂದು ಕೋಗಿಲೆ
ಹಾಡುತ ನಲಿಯುತಿದೆ ಮಾಮರದ ಮೇಲೆ..
ಹೂವು ಹೂವಿನ ಒಲವಿನ ಕೆನ್ನೆಯ ಮೇಲೆ
ಪೋಣಿಸುತಿದೆ ದುಂಬಿ ಸಿಹಿಮುತ್ತಿನ ಸರಮಾಲೆ..
ಸಂತಸದಿಂದ ರವಿ ಕುಣಿದು ಬಂದ ಕೂಡಲೇ
ಹೊಂಬಣ್ಣದ ಚಿತ್ತಾರ ಬಾನಂಗಳದ ಮೇಲೆ..
ಬಿಸಿಕಿರಣ ಮೈಮನ ಸೋಕುವ ಜೊತೆಯಲ್ಲೇ
ತೇಲಿಬರುತಿದೆ ತಂಗಾಳಿಯ ಹಿತವಾದ ಅಲೆ..
ತೂಗುತಿದೆ ಮನೆಮನದ ಬಾಗಿಲ ಮೇಲೆ
ಬೇವುಮಾವಿನ ತೋರಣ ಎಂಬ ಉಲ್ಲಾಸದ ಉಯ್ಯಾಲೆ..
ಒಲವಿನ ರಂಗೋಲಿ, ನಲಿವಿನ ಓಕುಳಿಯ ಮೇಲೆ
ಬರೆದಿದೆ ತನುಮನ ಹೊಸ ಕನಸುಗಳ ಓಲೆ..
ಎಣ್ಣೆಯ ಮಜ್ಜನ ಸರಿಸಿತು ನೋವಿನ ಕೊಳೆ
ಹೋಳಿಗೆ ಹೂರಣ ಸುರಿಸಿತು ಪ್ರೀತಿಸ್ನೇಹದ ಮಳೆ.
ಕಿರುನಗೆಯಲಿ ಮಿನುಗುವ ಶಶಿಯ ದರ್ಶನ ಪಡೆದ ಮೇಲೆ
ಕಳಚಿ ದೂರವಾಯಿತು ಮನುಜನ ಪಾಪದ ಬಲೆ..
ಸೃಷ್ಟಿಯಲಿ ಅಡಗಿದೆ ಸಿಹಿಕಹಿಯ ಸೆಲೆ
ಬೇವುಬೆಲ್ಲ ಬೆರೆತರೇನೇ ಬದುಕಿಗೊಂದು ಬೆಲೆ..
- ಸುರೇಶ್ ಟಿ ವಿ
17 Mar 2018, 12:53 pm
Download App from Playstore: