ಕೃತಘ್ನ
ಸೌಂದರ್ಯದಲಿ ರತಿಯು, ಮಾತಿನಲ್ಲಿ ಸೋತಿಲ್ಲದ ವಕೀಲೆಯು, ಬುದ್ಧಿಮತ್ತೆಯಲಿ ಸರಿಸಾಟಿಯಿಲ್ಲದ ಸರಸ್ವತಿಯು ನೀನು;
ನಿನ್ನಂತರಂಗಕ್ಕೆ ಲಗ್ಗೆ ಇಡಲು ಸಾಲುಗಟ್ಟಿದ್ದ ಬೃಹಸ್ಪತಿಗಳನ್ನೇ ತೊರೆದು ನನ್ನ ಸನಿಹದಲ್ಲೇ ಸ್ವರ್ಗ ಸುಖವನ್ನು ಕಂಡುಕೊಂಡವಳು ನೀನು;
ಮರದ ಕೊರಡಿನಲ್ಲೊಂದು ಚಿಗುರೊಡೆಸಿ, ಅನುಪಯುಕ್ತ ಕಲ್ಲಿನಲ್ಲಿ ಅನರ್ಘ್ಯ ರತ್ನವನು ಕಡೆದು ತೆಗೆದು, ಹಳ್ಳಿಯ ಗಮಾರನಲ್ಲೂ ಸಂಸ್ಕಾರವನ್ನು ಬೆಳೆಸಿದ ಪ್ರತಿಭಾನ್ವಿತೆ ನೀನು;
ಸಾಲು ಸಾಲು ಹೊಗಳುಭಟ್ಟರು, ಹೆಗಲು ನೋಯುವಷ್ಟು ಹೂವಿನ ಹಾರಗಳು, ಕಿವಿ ಗಡಚಿಕ್ಕುವ ಚಪ್ಪಾಳೆಗಳ ಮದ್ಯೆ ಕಳೆದು ಹೋಗದಂತೆ ಎಚ್ಚರಿಸಿದವಳು ನೀನು;
ಪ್ರೀತಿ, ಪ್ರೇಮ, ಸ್ನೇಹ, ಮಮತೆ, ಮಮಕಾರಗಳ ಪರಿಚಯ ಮಾಡಿಕೊಟ್ಟು ,ಈ ಪ್ರಭೇದಗಳ ದುರುಪಯೋಗವಾಗದಂತೆ ತರಬೇತಿ ಕೊಟ್ಟಳು ನೀನು;
ಕಾಮ, ಕ್ರೋಧ, ಲೋಭ, ಮೋಹ, ಮದ, ಮತ್ಸರ್ಯಗಳೆಂಬ ಅರಿಷಡ್ವರ್ಗಗಳನ್ನು ಹಿಡಿತದಲ್ಲಿಟ್ಟುಕೊಳ್ಳಲು ಸಹಕರಿಸಿದಳು ನೀನು;
ಕೊರಡಾಗಿ, ಕಲ್ಲಾಗಿ, ಹಳ್ಳಿಯ ಗಮಾರನಾಗಿ ಮತ್ತೆ ಬದಲಾಗಿ ಮೃದು - ಮಧುರ, ಸುಂದರ - ಸುಮಧುರ ಸಹೃದಯಿಯ ಹೃದಯವನ್ನು ಬಗೆದ ಕೃತಘ್ನ ನಾನು.
ಕ್ಷಮಿಸುವುದಾದರೊಮ್ಮೆ ಕ್ಷಮಿಸಿಬಿಡು,
ನೆಮ್ಮದಿಯಿಂದ ಬಾಳು, ನೂರ್ಕಾಲ ಬಾಳು,
ಸ್ನೇಹ ಮಾಡುವ ಮುನ್ನ ಇನ್ನೊಮ್ಮೆ ಚಿಂತಿಸಿ ನೋಡು.
- ಡಾ!ಸಿ.ಮುರಳೀಧರ
10 Apr 2018, 10:46 am
Download App from Playstore: