ತವರಿಗೆ ಬಾ ಎಂದೆನ್ನ ಕರೆವವರು ಯಾರಿಲ್ಲ
ಅಂದು ತವರಲಿ ನಾ ಬೀಗಿ ಉರಿಯುತ್ತಿದ್ದೆ
ನಾನೇ ಈ ತವರಿನ ಹಣತೆ ಎಂದು!!
ಮುದ್ದಿಸಿದರೂ ಎಲ್ಲ ಮುದ್ದು ಮಗಳೆಂದು
ಹಬ್ಬದ ಸಡಗರವ ಅನುದಿನವೂ ತಂದು!!
ಹರೆಯದಲಿ ಚಿಗುರಿಹ ಮುಗ್ಧ ಒಲವೊಂದು
ಬೆಳೆಯಿತು ಮರವಾಗಿ ಹಸಿರಲೇ ಮಿಂದು!!
ಜಾತಿಗೋಪುರವ ಕಟ್ಟಿ ಪೂಜಿಸುವರೆದುರು
ಪ್ರೀತಿಗೆ ಅಪ್ಪಣೆಯ ಬಯಸುತಲಿ ನಿಂದೆ!!
ವಿರಹದಲಿ ಬೆಂದಿಹ ಮನವು ಚಂಚಲವಾಗಿ
ಸಂಚರಿಸ ಹೊರಟಿತು ಅಲೆಮಾರಿಯಾಗಿ!!
ಕಲ್ಲಾದ ಮನದೆದುರು ಎಷ್ಟೇ ಬೇಡಿದರೂ
ಎಳ್ಳಷ್ಟು ಬೆಲೆ ಕೊಡದೆ ಕಡೆಗೆಣಿಸಿದರು!!
ಊರ ನಡುವಿನ ದೇಗುಲದಿ ನನ್ನ ಮದುವೆ
ವಧುವು ನಾನಾಗಿರಲು ಯಾರಿಲ್ಲ ಜೊತೆಗೆ!!
ನಾ ಬಯಸಿದ ಒಲವು ವರವಾಗಿ ನಿಂತಿರಲು
ವರನ ಮನೆಯವರೆದುರು ಒಬ್ಬಂಟಿ ನಡಿಗೆ!!
ಸುಖ ದುಃಖದ ಜೊತೆ ವರುಷ ಉರುಳಿರೆ
ಸಂತಸದ ಸಂಗತಿ ಉದರದಲಿ ಇಹುದು!!
ನವ ಮಾಸ ಕಳೆಯುವ ಹಾದಿಯಲಿ ಇಂದು
ಒಂಟಿ ಮನಸದು ಕೊರಗುತಿದೆ ನೊಂದು!!
ಕೈ ಹಿಡಿದು ಕೊಂಡೊಯ್ದ ಬದುಕು ಸುಂದರ
ದೇವರೇ ನೀಡಿದ ವರದಾನ ಈ ವರ!!
ತವರಿಗೆ ಬಾ ಎಂದೆನ್ನ ಕರೆವವರು ಯಾರಿಲ್ಲ
ಹಬ್ಬದ ಸಡಗರವೂ ನನ್ನ ಪಾಲಿಗಿಲ್ಲ!!
- ಪಿ.ಜಿ.ಜ್ಯೋತಿ
17 Jul 2018, 04:53 pm
Download App from Playstore: