ಪ್ರತಿಭೆಗ್ಯಾಕೆ ಭಾಷೆಯ ಬಂಧನ
ಬೆಳಗಲಿಳೆಯಲಿ
ಮನಗಳ ತಣಿಸಲಿ
ಬಂದಿಸದಿರಿ ಅದನು
ಭಾಷೆಯ ಸಂಕೋಲೆಯಲಿ
ವಿಜ್ಞಾನಿಯಾಗಿ ವಿಹರಿಸಬಲ್ಲ
ಕವಿಯಾಗಿ ಕರಗಬಲ್ಲ
ಜಾತಿ-ಮತ ಧರ್ಮದ
ಎಲ್ಲೆ ಮೀರಿ ತಾ ತೇಲಬಲ್ಲ
ಭಾಷೆಯ ಬಂಧನ ಅವನಿಗೆಸಲ್ಲದಲ್ಲ
ಮುಗ್ದ ಮಗುವಿನ ಮನದಲ್ಲಿ
ಆಂಗ್ಲದ ಬೀಜ ಚೆಲ್ಲಿ
ನಿಯಮಗಳ ಬಂಧನದಲಿ
ಬೆಳೆಸದಿರಿ ಪ್ರತೀಷ್ಠೆಯ ಕಣದಲ್ಲಿ
ಮುಗ್ದತೆಯ ಕೊಂದು
ಕೃತಕತೆಯಲಿ ಸಾಗುತಿಹೆವಿಂದು
ಆಂಗ್ಲವೇ ಸರ್ವಸ್ವವೆಂದು
ಮಾತೃಭಾಷೆಯ ಜರಿದು
ಜಗದ ಮೂಲಗಳ
ಮೆಲ್ಲುತ;ಅನುಭವಗಳ
ಸವಿಯ ಉಣಿಸುತ್ತ
ಮರೆಯಲಾಗದ ಕಗ್ಗವನಿತ್ತ
ಡಿವಿಜಿ ಕನ್ನಡಿಗರಲ್ಲವೇ
ಆಂಗ್ಲವ ಕಲಿತರು
ಕನ್ನಡಕಾಗಿ ದುಡಿದರು
ಜ್ಞಾನಪೀಠವ ಅಲಂಕರಿಸಿದ
ಕುವೆಂಪು ನಮ್ಮವರಲ್ಲವೇ
ಮಾಂಸದಮುದ್ದೆ ಮಗುವಾಗಲು
ಮಾತೆಯೇ ಮೂಲ
ಜಗದ ವಿದ್ಯೆ ಮನನವಾಗಲು
ಮಾತೃಭಾಷೆಯೆ ಮೂಲ
ಎಲ್ಲ ಬಲ್ಲವರು ನಾವೆಂಬ
ಮೌಡ್ಯವ ಬಿಡಿರಿ
ಅರಿಯುವುದು ಇದೆಯೆಂಬ
ನಿಜವ ತಿಳಿಯಿರಿ
ಅನ್ಯರ ಜರಿಯುವುದ ಬಿಟ್ಟು
ಬಾಳೋಣ ಮನದ ಕದವ ತೆರೆದಿಟ್ಟು
ಶಾರದ
- ಶಕುಂತಲಾ
30 Dec 2018, 09:50 am
Download App from Playstore: