ಕಾವ್ಯ ಹುಟ್ಟಿದ ಜಾಡು ಹಿಡಿದು..!
ಕೇರಿಯಂಚಿನ ಹೆಂಚಿನ ಮನೆಯ
ಕೆಂಚವ್ವನ ಮಂಚದೊಳಾಡುವ
ಕೂಸಿನ ನಸುನಗೆಯಲ್ಲಿತ್ತು ಕವಿತೆ..
ಬರದ ನಡುವೆ ಸುರಿದ ಸೋನೆಯ
ಹನಿಯೊಳು ಕುಣಿದಾಡುವ ಪೋರನ
ಮನದ ಮೂಲೆಯಲ್ಲಿತ್ತು ಕವಿತೆ..
ಮನೆಯ ಹುಂಜ ಕತ್ತೆತ್ತಿ ಕೂಗಿದಾಗ
ಕುಣಿದ ಶಿರದ ಕುಂಚದ ಕುಣಿತದಿ
ಅಂದಣವೇರಿ ಅಡಗಿ ಕುತಿತ್ತು ಕವಿತೆ..
ರೂಪಸಿಯ ಕಣ್ಣ ಸನ್ನೆಯ ನೋಟ
ವೈಯ್ಯಾರಿಯ ಬೆಕ್ಕಿನ ನಡಿಗೆಯ ಮಾಟ
ಕಂಡಾಗಲೆಲ್ಲ ನಕ್ಕು ಬಂದಿತ್ತು ಕವಿತೆ..
ದಾರಿಹೋಕ ವ್ಯಾಪಾರಿಯ ಕೂಗು
ಮಾರಿ ಜಾತ್ರೆಯ ಒಲಗದ ಸದ್ದಲ್ಲಿ
ಜಾರಿ ನನ್ನೋಡನೆ ಬಂದಿತ್ತು ಕವಿತೆ..
ಮಳೆ ಮಂಜು,ಇಳೆ ಹಸಿರ ಪರಿಸರ
ಬೀಸಿದ ತಂಗಾಳಿಯೊಡಲ ಬೆಸುಗೆಗೆ
ಮನದ ಮನೆಯಲ್ಲಿ ಮೂಡಿತ್ತು ಕವಿತೆ..
ಯಾರದೋ ಸಂಚಿಗೆ,ಜಾರಿದ ಕಂಬನಿ
ಒಡನೆ ಕಾಡಿದ ಕೆಂಗಣ್ಣಿನ ಮಿಂಚಿಗೂ
ದಕ್ಕಿತ್ತು ಗಾವಿಲರ ದಿಕ್ಕರಿಸಿದ ಕವಿತೆ..
ಒಕ್ಕುವ ರೈತನ ತೋಳ್ಬಲದಡಿಯಲ್ಲಿತ್ತು
ಮೊಲ್ಲೆ ಮುಡಿದ ಹೆಣ್ಣಿನ ಮುಡಿಯಲ್ಲಿತ್ತು
ಒಲ್ಲೆನೆಂದರೂ ಬಿಡದೆ ಕಾಡುವ ಕವಿತೆ..
- ಲಕುಮಿಕಂದಮುಕುಂದ
16 Jan 2020, 05:09 pm
Download App from Playstore: