ಶಿವರಾತ್ರಿ
ಮಾಘ ಮಾಸ ಕೃಷ್ಣ ಚತುರ್ದಶಿಯದು
ದೇವತೆಗಳಲ್ಲಿ ಅತ್ಯಂತ ನಿಗೂಢನಾಗಿಹ
ಲೋಕಕಲ್ಯಾಣಕ್ಕಾಗಿ ವಿಷವ ಆಪೋಶಿಸಿಹ
ತ್ರಿಮೂರ್ತಿಗಳಲ್ಲಿ ಒಬ್ಬನಾಗಿರುವ
ಪಂಚಭೂತಗಳ ಒಡೆಯನಾಗಿಹ ಶಿವನಿಗೆ
ಪಾರ್ವತಿಯೊಂದಿಗೆ ಭೂ-ಸಂಚಾರ ಯೋಗ.
ಪರ್ವತ ರಾಜನ ಮಗಳಾದ ಪಾರ್ವತಿಯು
ಸದಾ ಶಿವನ ಸೇವೆಯಲ್ಲಿ ತೊಡಗಿಕೊಂಡು
ಆಹಾರ ತ್ಯಜಿಸಿ ಧ್ಯಾನ, ಪ್ರಾರ್ಥನೆಯಿಂದ
ಶಿವನ ಪ್ರೀತಿಯನ್ನು ಒಲಿಸಿಕೊಂಡು
ದೇವಾನುದೇವತೆಗಳ ಸಮಕ್ಷಮದಲ್ಲಿ
ಮದುವೆಯಾದ ಸುಂದರ ದಿನವಿದು.
ಗಂಗೆಯನ್ನು ತಲೆಯ ಮೇಲೆ ಹೊತ್ತು
ಎದೆಯಲ್ಲಿ ಗೌರಿಯನ್ನು ಕುಳ್ಳಿರಿಸಿ
ಸುಬ್ರಹ್ಮಣ್ಯನನ್ನು ಸರವಾಗಿ ಧರಿಸಿ
ನಂದಿಯ ಮೇಲೆ ಕುಳಿತುಕೊಂಡ
ಕೈಲಾಸವಾಸಿಯ ರುದ್ರತಾಂಡವನಿಗೆ
ಭೂಸಂಚಾರ ಮಾಡುವ ಸುಮಧುರ ದಿನ.
ಭೂಮಿಯ ಮೇಲಿನ ಜೀವರಾಶಿಗಳು
ಸೂರ್ಯೋದಯಕ್ಕೂ ಮುನ್ನ ಎದ್ದು
ಶುಚಿರ್ಭೂತರಾಗಿ ಶಿವ ನಾಮವ ಜಪಿಸತ್ತಾ
ರಾತ್ರಿಯೆಲ್ಲ ಜಾಗರಣೆಯಿಂದ ಇದ್ದು
ರಾತ್ರಿಯ ಕತ್ತಲೆಯ ನಂತರ ಬರುವ
ಬೆಳಕಿನ ಅರ್ಥ ಹುಡುಕುವ ದಿನವದು.
ಆಡಂಬರ ಮುಕ್ತ, ಭಸ್ಮವ ಬಳಿದಿಹ,
ಹುಲಿಚರ್ಮ ಉಟ್ಟ, ಧ್ಯಾನಪ್ರಿಯನಿಗಾಗಿ
ಹಗಲು ಉಪವಾಸ, ರಾತ್ರಿ ಜಾಗರಣೆ ಮಾಡಿ,
ಶಿವನ ಕೃಪೆಗೆ ಪಾತ್ರವಾಗುವ ಶುಭದಿನ.
ಉಪವಾಸ, ಜಾಗರಣೆ ಮತ್ತು ಶಿವಧ್ಯಾನಗಳ
ಸಂಗಮವೇ ಭೂಲೋಕದಲ್ಲಿ ಶಿವರಾತ್ರಿ.
- ಅಕ್ಷತ
21 Feb 2020, 06:45 pm
Download App from Playstore: