ಕುರುಡ ಕಂದೀಲು

ಅಪ್ಪ ನೀ, ಇಷ್ಟು ಬೇಗ ಬದುಕಿನ ಸಂತೆ ಮುಗಿಸಿ ಎದ್ದು ಏಕೆ ಹೋದೆ? ಮೇಲೆ ನಿಂತು ನಿನ್ನ ಕೂಗಿ ಕರೆದವರಿಗೆ ದಿಕ್ಕಾರವಿರಲಿ.

ಅವ್ವ ಸುಡು ಬಿಸಿಲೊಳಗೆ ನೆತ್ತಿ ನೆಗ್ಗಿಸಿಕೊಂಡು, ಬೆನ್ನು ಬಾಗಿಸಿಕೊಂಡದ್ದು ನಿನಗೆ ಕಾಣಲಿಲ್ಲವೆ?

ತುತ್ತು ಅನ್ನಕ್ಕೂ, ಅವ್ವ, ಅಜ್ಜಿ, ಅಕ್ಕ ,ತಂಗಿ, ನಾನು ಊರ ಬೀದಿಯಲಿ, ಓಣಿ ಓಣಿಯಲಿ ನಿಂತು ಅಂಗಲಾಚಿದ್ದು ನಿನಗೆ ಕಾಣಲಿಲ್ಲವೆ?

ತೇಪೆ ಹಚ್ಚಿದ ಅಜ್ಜಿ-ಅವ್ವಳ ಸೀರೆ, ಅಕ್ಕ-ತಂಗಿಯ ಲಂಗ ದಾವಣಿ ನಿನಗೆ ಕಾಣಲಿಲ್ಲವೇ?

ನಿನ್ನ ಸಮಾಧಿ ಬಳಿಗೆ ನಾವೆಲ್ಲರೂ ಎಷ್ಟೋ ಸಾರಿ ಬಂದು, ಬಿರುಕು ಬಿಟ್ಟ ನೆಲದ ಸಂಧಿಯಲಿ ಕೂಗಿ ಕರೆದರೂ ನಿನಗೆ ಕೇಳಿಸಲಿಲ್ಲವೇ?

ನೀ ಬಿಟ್ಟು ಹೋದ ಹೊಲಿಗೆ ಯಂತ್ರ, ರಾತ್ರಿ ಎದ್ದು ಎದೆ ಎದೆ ಬಡೆದುಕೊಂಡು ಮತ್ತೆ ಬೋರಲು ಬಿದ್ದು,ಅಳುವ ಸದ್ದು ನಿನಗೆ ಕೇಳುತ್ತಿಲ್ಲವೆ?

ನೀ ಸುತ್ತಿ ಇಟ್ಟು ಹೋದ ಮಡುಗಟ್ಟದ ದುಃಖದ ದಾರದ ರೀಲಿನ ಉಂಡೆ ನಮ್ಮೆಲ್ಲರ ಕಾಲಿಗೆ, ಕೈಗೆ, ಕುತ್ತಿಗೆಗೆ ಸುತ್ತಿಕೊಂಡು ನಮಗೆ ಉಸಿರುಗಟ್ಟಿಸುತ್ತಿದೆ ಇದು ನಿನಗೆ ಕಾಣುತ್ತಿಲ್ಲವೇ?

ನೀ ಬಿಟ್ಟು ಹೋದ ಮುರುಕ ಸಂಧುಕದ ಪೆಟ್ಟಿಗೆ ನಮ್ಮ ಬದುಕಿಗೆ ಜೀವಂತ ಶವದ ಪೆಟ್ಟಿಗೆಯಾಗಿ ದಿನವೂ ನಮ್ಮನ್ನು ಹಂಗಿಸುತ್ತಿದೆ. ಇದು ನಿನಗೆ ಕಾಣುತ್ತಿಲ್ಲವೇ?

ನೀ ಹೋದ ದಿನದಿಂದ ಆ ಚಂದ್ರ ನಮ್ಮ ತೂತು ಬಿದ್ದ ಸೂರ ಮೇಲೆ ಬೆಳದಿಂಗಳು ಚಲ್ಲಿಲ್ಲ, ಆ ನಕ್ಷತ್ರಗಳು ಹಲ್ಲು ಕಿಸದೇ ಇಲ್ಲ ,ನಿನಗೇಕೆ ಇದು ತಿಳದಿಲ್ಲ?

ಹೊಟ್ಟೆಯೊಳಗೆ ಹೊತ್ತುಕೊಂಡು ಉರಿಯುವ ಉದರಾಗ್ನಿಗೆ ಅಗ್ನಿಶಾಮಕ ಕಳಸಲು ಹೇಳುವವರು ಯಾರು

ನಿನ್ನ ಹೆಗಲ ಮೇಲೆ ಕುಳಿತು ಜಾತ್ರೆಗೆ ಹೋಗಿ ಬಲೂನ, ಪೀಪಿ, ಮೆನಸಿನಕಾಯಿ ಬಜಿ ಕೊಂಡಿಸಿಕೊಳ್ಳುವ ಕನಸು ಎದೆಯಲ್ಲಿ ಹಾಗೆ ಬಿಕ್ಕಿ, ಬಿಕ್ಕಿ ಸಾಯುತ್ತಿದೆ.

ಕತ್ತಲೆಯ ರಾತ್ರಿಯಲಿ, ಈ ಕುರುಡು ಕಂದೀಲ ಬೆಳಕಿನಲ್ಲಿ ಬದುಕಿನ ಕವನ ಅಂಗಾತವಾಗಿ ಅನಾತವಾಗಿ ಮಲಗಿದೆ. ಎಬ್ಬಿಸಲು ನೀ ಎಂದು ಬರುವೆ?

ರಚಣೆ: ರೇವಣಸಿದ್ದ ವೀ ಗೌಡರ

- Siddugouda

02 Apr 2020, 07:22 pm
Download App from Playstore: