"ಪ್ರಕೃತಿಯ ಪಾಠ"

"ಪ್ರಕೃತಿಯ ಪಾಠ"

ಎಲ್ಲಿಂದಲೋ ಬಂದ ಕಾಣದಾ ಸೂಕ್ಷ್ಮಾಣುವೊಂದು
ಮನುಜ ದೇಹವ ಸದ್ದಿಲ್ಲದೆ ಹೊಕ್ಕು ರೋಗವ ತಂದು
ಅಬ್ಬರದಾರ್ಭಟಕೆ ವಿಶ್ವದೆಲ್ಲರು ಸೊರಗಿಹರಿಂದು ನೊಂದು
ಆವರಿಸಿಹ ಕತ್ತಲು ಕಮರಿ ಬೆಳಕು ಬೀರುವುದು ಇನ್ನೆಂದು|

ನೀತಿ ನಿಯಮ ಗಾಳಿಗೆ ತೂರಿದ ಅಜ್ಞಾನ ಅಹಮಿಕೆ
ಮತಿಗೆಟ್ಟ ಮನದ ಓಟಕೆ ಅಂಕುಶದ ಅಂಕೆಯ ಕುಣಿಕೆ
ರೋಗ ರುಜಿನಕೆ ಅಂಜದೆ ತಿರುಗಿ ಸಾವಿನ ಬಳಿಗೆ ಸಾರಿ
ವಿನಮ್ರದಿ ನನ್ನದೊಂದು ಮನವಿ ಇಂದು ಒಳಗಿರೆಂದು ಕೋರಿ||

ನೇಹಿ ಬಂಧು ಬಾಂಧವರ ಕಂಡು ತಬ್ಬಿ ಮುತ್ತಿಕ್ಕಿ ಕೈಕುಲುಕುವ ಅನ್ಯರ ಸಂಸ್ಕೃತಿ
ಈಗಲಾದರೂ ಕರಮುಗಿದು ಉಪಚರಿಸಿ ಮೆರೆವ ಧನ್ಯ ನನ್ನಮ್ಮ ಭಾರತಿ
ಭವ್ಯತೆಗೆ ಮೆರಗಿಟ್ಟು ನವ್ಯತೆಯ ಸೋಗನಳಿಸಿ ಬೆಳಗಿಸಿ ಸಂಸ್ಕೃತಿಯ ಆರತಿ||

ಎತ್ತ ಸಾಗಿದೆ ಅವಿವೇಕದಿ ಅಜ್ಞಾನದಿ ವರ್ತಿಸುತಿಹ ಜನ
ರಣಕೇಕೆ ಹಾಕಿ ಬರೆದಾಗಿದೆ ಮರಣ ಮೃದಂಗ ಶಾಸನ
ಗುರಿಯಿಲ್ಲದ ಅತಿಯಾಸೆಯ ವೇಗಕೆ ಬೇಕಿಂದು ಕಡಿವಾಣ
ಪ್ರಕೃತಿಯ ಮುನಿಸನಳಿಸಿ ತಣಿಸಲು ಎಲ್ಲರೊಟ್ಟಿಗೆ ಬದುಕಿ ಬಾಳೋಣ||

ಎಲ್ಲಿ ನೋಡಿದಲ್ಲಿ ಶವಗಳ ರಾಶಿ ಬೇಕು ಬೇಡಗಳ ಗೊಡವೆ
ಸಾಮಾಜಿಕ ಅಂತರವಿರಲಿ ಒಳಿತಿಗಾಗಿ ನಮ್ಮೆಲ್ಲರ ನಡುವೆ
ಗೊತ್ತಿಲ್ಲದೆ ದೂರದೂರಿಂದ ತಂದು ಮಹಾ ಮಾರಿಯ ಹೊತ್ತು
ನಿರ್ಲಕ್ಷದಿ ಬೀದಿಯೆಲ್ಲವ ಸುತ್ತಿ ತಂದರು ಅಮಾಯಕರ ಪ್ರಾಣಕ್ಕೆ ಕುತ್ತು||

ಕಾಲನ ಕರೆಯನುಡುಕಿ ಹೊರಟಂತಿದೆ ಮೇರೆ ಮೀರಿದ ದುರಾಸೆ
ನಿಸರ್ಗ ಕಲಿಸಿ ತೋರಿಸಿ ಮೆರೆಯುತಿದೆ ತನ್ನದೇ ಆದ ವರಸೆ
ನಶ್ವರವೀ ಬದುಕು ಒಳಿತು ಮಾಡಿ ನಡೆ ಅಂತ್ಯ ಶಾಶ್ವತ
ಮರೆತು ಬೀಗಿ ನೋವನುಳಿಸಿ ಬಿಕ್ಕಿ ಆಗದಿರು ನೀನು ಅನಾಥ||

ಅನ್ಯಾಯ ಅಕ್ರಮಗಳ ಸುಳಿಗೆ ಸಿಲುಕಿ ತುಂಬಿದೆ ಪಾಪ ಕರ್ಮಗಳ ಜೋಳಿಗೆ
ಅಹಂಕಾರ ಅಜ್ಞಾನ ಅಂದಕಾರದ ಸ್ವಾರ್ಥದ ಕಲೆಯ ಗುರುತು ಬಾಳಿಗೆ
ನಿರ್ಗತಿಕರ ಬದುಕ ಕಿತ್ತು ನಡುಬೀದಿಗೆ ತಂದಿದೆ ರಕ್ತಪಿಪಾಸು ದಾಳಿಗೆ
ದಿಕ್ಕುಗಾಣದೆ ಎತ್ತೆತ್ತಲೋ ಸುತ್ತುತ್ತಿದೆ ದಿಕ್ಕಿಲ್ಲದೆ
ಸಿಲುಕಿ ಸುಳಿಗಾಳಿಗೆ||

ಮಾಲಿನ್ಯಕೆ ಮುನ್ನುಡಿ ಬರೆದು ಪ್ರಕೃತಿ ನಾಶಕೆ ಭ್ರಮೆಯ ಬೆನ್ನೇರಿ
ದಾರ್ಶನಿಕರ ನುಡಿಸಾರ ಅತಿಯಾಸೆ ಸಲ್ಲದೆಂದು ಅಂದೇ ಸಾರಿ
ಕೇಳಲೊಲ್ಲ ಕೆಡುಕು ಮತಿಗೆಟ್ಟ ಮೂಢ ಮಾನವ ಎಲ್ಲ ಗಾಳಿಗೆ ತೂರಿ
ಕೆಣಕಿ ಕಾಡುತಿದೆ ಇಂದು ಪ್ರಕೃತಿ ಇಣುಕಿ ಅಣಕದ ನಗುವ ಬೀರಿ||

ಬಿಕ್ಕುತ್ತಿದೆ ಮನ ಬದುಕನರಸಿ ಬಂದವರ ನೆನೆದು
ಬರಿಗೈಲಿ ಕುಳಿತಿಹರು ದಿಕ್ತಪ್ಪಿ ಬಸವಳಿದು ಬೆಂದು
ಬೆಂಗಾವಲ ಬೆಳಕಿಲ್ಲದ ಬಾಂಧವರ ನೆರಳಿಲ್ಲದೇ ನೊಂದು
ಬದುಕ ಕಳೆದುಕೊಂಡು ನೊಂದವರ ಕಂಬನಿಯ ಕಂಡು||

ಸ್ವಾರ್ಥದಾಸೆಗೆ ಕಟ್ಟಿದಾ ಅಂತಸ್ತಿನ ಕೋಟೆಯ ಕನಸು
ದಿಕ್ಕೆಟ್ಟು ಓಡುತಿದೆ ಒಂದೆಡೆ ನಿಲ್ಲದಾ ಹುಚ್ಚು ಮನಸು
ಕಟ್ಟಿ ಹಾಕು ದುರಂತಕೆ ಮುನ್ನ ಹಿಡಿದು ಈಗಲೇ ನಿಲ್ಲಿಸು
ನಿಸರ್ಗದ ಮುನಿಸು ಅದು ನಮ್ಮದೇ ಪಾಪಕರ್ಮ ತಾಳಿ ಸಹಿಸು||

ಜೀವದುಸಿರ ಉಳಿಸಲೊಸುಗ ಒಳಗಿರೆಂದು ನನ್ನ ಮನವಿ
ಮಡದಿ ಮಕ್ಕಳ ತಂದೆ ತಾಯ್ಗಳೊಟ್ಟಿಗೆ ಇರಿ ನವಿರಾಗಿ ಮೈದಡವಿ
ಬದುಕ ಧಾವಂತದ ಭ್ರಮೆಯಲಿ ಕಳೆದುಳಿದ ಮಮತೆಯ ಪ್ರೇಮಾಂಕುರ
ಮೌಲ್ಯಗಳುದಿಸಿ ಸಂಬಂಧಗಳ ಬೆಸುಗೆಯ ಚಿಲುಮೆ ಹತ್ತಿರ||

ನಮಿಸುವೆನು ನಾನು ಹಗಲಿರುಳು ಕಾಯ್ವ ರಕ್ಷಕರಿಗಿಂದು
ಜೀವ ಪಣವಿಟ್ಟು ಶ್ರಮಿಸುವ ವೈದ್ಯರಿಗೆ ಮುಂದೆ ಎಂದೆಂದು
ಬಿರುಬೇಸಗೆಯ ತಾಳಲಾರದ ಸೆಕೆ ಅಬ್ಬರಿಸುತಿದೆ ಸಾವಿನ ರಣಕೇಕೆ
ಮಡಿಲ ಕುಡಿಯ ಸತಿಯ ಒಲವ ಗಳಿಸಿ ಮೆರೆಸಲು ಒಳಗಿರಬಾರದೇಕೆ ....??!!

- gp

03 May 2020, 04:43 pm
Download App from Playstore: