ತಲೆಗೆ ಬಟ್ಟೆ ಸುತ್ತಿ
ಸುಡುವ ಬಿಸಿಲಿಗೆ ಮೈಯೊಡ್ಡಿ
ಏಕಾತನತೆಯಲಿ ಕೆಲಸದೊಳಗೆ ಮಗ್ನರಾಗಿ
ನಿತ್ಯ ದುಡಿವರು, ಅನ್ನ ಬೆಳೆವರು
ಅವರೆ ನನ್ನ ಜನರು
ಕೈಬಳೆಯ ಸದ್ದುನಡಿಗಿಸಿ
ಬೆಳ್ಳಿಕಾಲುಂಗುರಗಳು ಮಾಸಿ
ಕೊರಳಲಿ ಕರಿಮಣಿಸರದೊಳಗೆ
ಬೆವರ ಬೆರಿಸಿ
ಕಿವಿಯ ಬೆಂಡೊಲೆಗೆ ತನ್ನೂಸಿರ ಸೇರಿಸಿ
ಲೋಕದ ಹಸಿವ ನೀಗುವರು
ಅವರೆ ನನ್ನ ಜನರು
ಮಂಡಿಯೂರಿ ಕೂತು ಕಳೆ ಕೀಳುವರು
ಸಾಲು ಸಾಲು ಹಿಡಿದು
ಪಸಲು ಬೆಳೆವರು
ಚೆಂದದ ಹೂವುಗಳ ಮಾಲಿಕರು
ಅಂದದ ಕಪ್ಪೊಡಲಿನ ಬೆಡಗಿಯರು
ಜಗದ ನೋವ ಬಲ್ಲವರು
ಅವರೆ ನನ್ನ ಜನರು
ಕೂಲಿ ನಾಲಿ ಮಾಡುವರು
ಮಕ್ಕಳ ಕನ್ನಡ ಶಾಲೆಗೆ ಕಳುಹಿಸುವರು
ವಿದ್ಯಾವಂತರಲ್ಲದಿದ್ದರೂ
ಬಾಬಾಸಾಹೇಬರ ನೆನೆವರು
ಅವರಂತೆ ನಮ್ಮ ಮಕ್ಕಳು
ಆಗಲಿ ಎಂದು ಕನಸ ಕಾಣುವರು
ಅವರೆ ನನ್ನ ಜನರು
ಬುದ್ಧನ ಚಿಂತನೆಯಲೆ ಬದುಕುವರು
ಧಮ್ಮ ಮಾರ್ಗದಲ್ಲೆ ನಡೆವರು
ಸದ್ಧಮ್ಮದಲ್ಲೆ ಮಡಿವರು
ಸತ್ಯ ನ್ಯಾಯ ಮಾನ ಮಾರ್ಯದೆಗಾಗಿ
ಪ್ರಾಣವನ್ನೆ ಪಣವಾಗಿಡುವರು
ಅವರೆ ನನ್ನ ಜನರು
ಡಾII ನಾಗೇಶ್ ಮೌರ್ಯ
9743907399
- ಡಾ ನಾಗೇಶ ಮೌರ್ಯ
09 Jun 2025, 05:15 pm
Download App from Playstore: