ನಾನು ನಿರಪರಾಧಿ...
ನಾನು
ಅಂತ ತಪ್ಪು ಮಾಡಿಲ್ಲ
ಆದರೂ ನನ್ನ
ಸಾಯಿಸಿಬಿಟ್ಟರು...
ಯಾರೋ
ಮಾಡಿದ ತಪ್ಪಿಗೆ
ನನಗೆ ಜೀವಕಳೆವ ಶಿಕ್ಷೆ
ನೀಡಿದರು.....
ನಾ ಸುಮ್ಮನೆ
ತಿರುಗಾಡಿಕೊಂಡಿದ್ದೆ
ಒಮ್ಮೊಮ್ಮೆ ಸಿರಿವಂತರ
ಮನೆಯೊಳಗೆ ತಿಜೋರಿಯಲಿ
ಮಲಗಿರುತಿದ್ದೆ
ಎಷ್ಟೋ ಕಾಲದಿಂದ
ನನ್ನನ್ನು ಮಾತನಾಡಿಸಿಯೇ
ಇರಲಿಲ್ಲ ಕೆಲವರು
ನಮಗೂ ಬೇಜಾರಾಗಿತ್ತು
ಬಡವರು ಮಾತ್ರ
ಅಲ್ಲಿಂದಿಲ್ಲಿಗೆ ಇಲ್ಲಿಂದಲ್ಲಿಗೆ
ಮುದುರಿಕೊಂಡು ಕೊಳೆಯಾದ
ಜೇಬಿನಿಂದಿಡಿದು
ಮೃದುವಾದ ಹೆಣ್ಣಿನ
ಎದೆಯೊಳಗೆಲ್ಲಾ
ಓಡಿಯಾಡಿಸಿಬಿಟ್ಟರು....
ಸಿರಿವಂತರ
ತಿಜೋರಿಯ ನುಗ್ಗಲು
ವಾಸನೆಗಿಂತ
ಬಡವರ ಬೆವರಿನ ಘಮ
ಸುಮಧುರ ಅನಿಸುತಿತ್ತು
ಈಗ ಏಕಾಏಕಿ
ನೇಣಿಗೇರಿಸಿಬಿಟ್ಟರು
ನಾ ಮಾಡಿದ
ಅಪರಾಧವಾದರೂ ಏನು??
ನಾನು
ಐನೂರಾಗಿ
ಸಾವಿರಗಳಾಗಿ ಹುಟ್ಟಿದ್ದೇ
ತಪ್ಪಾ....
ಯಾರೂ ಕೇಳುವರಿಲ್ಲ
ನನ್ನ ಗೋಳು
ನಾನು ನಿರಪರಾಧಿ....
ಸಂತ ನಕ್ಕಲುಬಂಡೆ...
- ಸಂತ ನಕ್ಕಲುಬಂಡೆ
15 Nov 2016, 01:28 pm
Download App from Playstore: