ನಗುಮೊಗದಾಶಿಕನ ಅಗಲಿಕೆಗೆ.

ಕಿರುಹರೆಯದ ಹೊತ್ತಿನಲಿ,
ಹುಡುಗಾಟದ ಮತ್ತಿನಲಿ,
ನೀ ಬರಿ ನೆನಪಾಗಿ ಹೋದದ್ದು
ಸರಿಯೇನೋ. . ಹುಡುಗ.

ಏಲ್ಲಾ ಹೊರಟಿದ್ದರೇನಾಯ್ತ?
ನಿನವ್ವ ಬೇಡ ಅಂದದಕ್ಕೂ
ಕಾರಣವಿತ್ತು.
ತಿರುಗಾಟ ಎಂದರೇನೆ
ವಾಂತಿ ಮಾಡುತ್ತಿದ್ದ ನಿನಗೆ,
ಪ್ರವಾಸ ಸುತ್ತುವುದು
ಬಲು ತ್ರಾಸಾಗುತ್ತಿತ್ತು.

ನೀ ಇನ್ನಷ್ಟೂ ಕಾಟ ಕೊಟ್ಟಿದ್ದರವರು ಒಪ್ಪುತ್ತಿದ್ದರೇನೋ. . ?
ನೀ ಅವರ ಪ್ರೀತಿಯ ಏಕೈಕ ಕೂಸಲ್ಲವೇನೋ.. ?
ಕೊಟ್ಟವರು ಯಾರು
ನಿನಗಾ ಕೆಟ್ಟ ಸಲಹೆ. .?
ಬೇಕಿತ್ತೇ ನಿನಗದು
ಹನ್ನೇರಡರ ವಯಸಿನೊಳಗೆ. .?

ಅಮ್ಮ ಬರುವ ವೇಳೆಗೆ
ಸಾಯುವಾಟದ ನಾಟಕವಾಡಲು ಹೋಗಿ.
ತಡವಾಗಿ ಬಂದಮ್ಮನ
ಮಡಿಲು ಸೇರಿದೆಯಾ ಶವವಾಗಿ..
ಉರುಳು ಹಾಕದೆ ಕುತ್ತಿಗೆಗೆ
ಸುತ್ತಿಕೊಂಡ ಸೀರೆ
ಪ್ರಾಣ ತೆಗೆಯಿತೆಂದಾರದು
ವಿಧಿಯ ಕರೆ.

ಅಡ್ಡ ಕಂಬಕ್ಕೂ ಸಿರೇಯ
ಗಂಟು ಹಾಕಿರಲಿಲ್ಲ.
ನೀ ಹಾರಿದಾಕ್ಷಣ ಜಾರಿ
ಬರುವುದೆಂಬ ಉಪಾಯವಿತ್ತಲ್ಲ..
ಆದರೆ ನಿನ್ನಾಯಸ್ಸು
ಮುಗಿದಿರಬೇಕು.. .
ಅದಕೆಂದೆ ಆ ಹತ್ತಿಯ ಸೀರೆ
ಜಾರದೆಯೇ ಕುಳಿತಿರಬೇಕು..

ಬೇಕಿತ್ತೇ ನಿನಗೀ
ಸಾವಿನೊಂದಿಗಿನಾಟ
ಬದುಕಿಸಿಕೋ ಅಮ್ಮ
ಎಂಬ ಕೊನೆಯ ಅಳಲಾಟ.
ಶಾಲೆಯೇ ಪ್ರವಾಸವ ರದ್ದು
ಮಾಡಿದೆ ಕಂದ.
ಮತ್ತೆದ್ದು ಬಾನೀನು
ಆಶಿಕ ನೆಂಬ ಮುದ್ದು ಮುಖದಿಂದ. .. .

- ಶೈಲಸುತೆ

09 Dec 2016, 08:10 pm
Download App from Playstore: