ಸ್ಪಂದನೆ

ಇಳೆಯ ಹಾಳೆಯ ಮೇಲೆ,ಎಳೆಯ ಕಿರಣಗಳಿಂದ,
ನಿತ್ಯ ಬರೆಯುತಲಿಹನು,
ರವಿಯೊಂದು ಕವನ!
೧.ತರುಲತೆಗಳಿಬ್ಬನಿಯ,
ಬಿಂದುಮಾಲೆಗಳಿಂದ,
ಸಂತಸವ ಸೂಸುತಿವೆ,
ಮೆಚ್ಚಿ ರವಿಯ!
೨.ಕಮಲ ನಗೆ ಬೀರುತಿದೆ,
ಕೋಗಿಲೆಯು ಹಾಡುತಿದೆ,
ಕೋಳಿಯೂ ಕೂಗುತಿದೆ,
ಹರುಷ ಮೀರಿ!
೩.ಹಕ್ಕಿ ಪಿಕ್ಕಿಗಳೆಲ್ಲ,
ರೆಕ್ಕೆ ಪುಕ್ಕವ ಕೆದರಿ,
ಉಕ್ಕಿದುತ್ಸಾಹದೊಳು,
ಮುಗಿಲಿಗೆಗರಿ,
ಚಿಲಿಪಿಲಿಯ ಉಲಿಯಿಂದ,
ಕಿಲಕಿಲನೆ ನಗುನಗುತ,
ತಿರೆಗೆ ಹಿಂತಿರುಗುತಿವೆ,
ಸೊಬಗ ತೋರಿ!
೪.ಉದಯ ಗೀತೆಗೆ ತನ್ನ,
ಝೇಂಕಾರ ಶೃತಿ ಬೆರೆಸಿ,
ದುಂಬಿ ನಲಿದಿದೆ ಸುಮದ,
ಮಧುವ ಹೀರಿ!
೫.ರವಿಯೆಂಬ ಕವಿ ಬರೆವ,
ರಮಣೀಯ ಕವನಕ್ಕೆ,
ಇಂತು ಗೈದಿದೆ ಸೃಷ್ಟಿ,ತನ್ನ ನಮನ!
೬.ನಾನೆಂಬ ಭ್ರಮೆ ಸುಳಿಗೆ,
ಸಿಕ್ಕಿರುವ ಮನುಜನಿಗೋ,
ಶೂನ್ಯವಾಗಿಹುದಿಂದು,
ಸ್ಪಂದಿಸುವ ಸುಗುಣ.....
ಉದಯಾಸ್ತದಲೂ ಇವನ
ಹೃದಯಹಾಡುವುದೊಂದೇ
"ನಾನು-ನನ್ನದು" ಎಂಬ ಸವಿಯ ಗಾನ!!
✍ಮಲ್ಲಿಭಾಗವತ ✍

- ಮಲ್ಲಿಭಾಗವತ್ ಗುಡಿಬಂಡೆ

21 Dec 2016, 10:26 am
Download App from Playstore: