ವಾಸ್ತವ

ಬಿರುಕು ಬಿಡುತಿದೆ ಮಡಿಲಿಗೆ,
ಕೊಡಲಿ ತಗಲುತಿದೆ ಒಡಲಿಗೆ,
ದುಃಖ ದುಮ್ಮಾಲೆಗಳು ಬಡವರಿಗೆ,
ಸವಿಜೇನ ಸಿಹಿ ಸಿರಿವಂತರಿಗೆ..

ಕೊರಗುವಾ ದನಿಯೆಲ್ಲಾ
ನರಳಿ ನರಳಿ ನಶಿಸುತಿದೆ..
ಕುಣಿದು ಕುಪ್ಪಳಿಸುವವರ
ಅಹಂ ಇನ್ನು ಹೆಚ್ಚುತಿದೆ..

ಮನಸಿನ ಸಿರಿ ಹೊಂದವರ ಮನ
ಕುಸಿ ಕುಸಿದು ಬೀಳುತಿದೆ..
ಹಣವಂತರ ತುಳಿದಾಟಕೆ
ಮನ ಚೂರು ಚೂರಾಗುತಿದೆ..

ಬಡತನ-ಸಿರಿತನದ ಬೇಧ
ದಿನ ದಿನವೂ ಬೆಳೆಯುತಿದೆ..
ಎರಡು ತನದ ತೂಕದಲಿ
ಬಡತನವೇ ನೋಯುತಿದೆ..

ಬದುಕಿನುದ್ದ ಹಣೆಬರಹ
ಬಡವರ ಕಿತ್ತು ತಿನ್ನುತಿದೆ..
ಅನ್ನ ನೀಡೊ ರೈತರ ಬದುಕು
ಸುಟ್ಟು ಕರಕಲಾಗುತಿದೆ..

ಭಾಷಣವಾ ಬಿಗಿಯುವ
ಭಂಡರಿಗೆ ಜಯ ದೊರಕುತಿದೆ..
ಜಯವ ದೊರೆತ ಕ್ರಿಮಿಗಳೆಲ್ಲ
ಬಡವರ ಬಲಿ ಹಾಕುತಿದೆ.
ಬಡವರ ರಕ್ತ ಹೀರುತಿದೆ..

ಇದೇ ದಾರಿ ಹಿಡಿ ಹಿಡಿದು,
ರಾಜಕೀಯ ಬೆಳೆಯುತಿದೆ..
ಕೀಚಕ ಜನರ ಕೈ ಕೆಳಗೆ,
ಬಡವರ ಬದುಕಿದು
ಬಲಿಯಾಗುತಿದೆ...

ಪ್ರಶ್ನೆಗಳ ಸರಪಳಿಯು
ಎಳೆದೆಳೆದು ಸಾಗುತಿದೆ..
ಗೊತ್ತಿದ್ದೂ ಗೊತ್ತಿಲ್ಲದ ಹಾಗೆ
ಉತ್ತರವು ಸಾಯುತಿದೆ..

ನ್ಯಾಯ ಕರಗಿ ನೀರಾಗುತಿದೆ..
ಅನ್ಯಾಯ ಮೆರೆದು ಬೀಗುತಿದೆ..

- ವಿ.ತ್ರಿವೇಣಿ ಪಾಂಡವಪುರ

- ವಿ. ತ್ರಿವೇಣಿ ಪಾಂಡವಪುರ

27 Dec 2016, 01:53 pm
Download App from Playstore: