ನಾ ಕಂಡ ಪ್ರಪಂಚ

ಪ್ರತಿ ದಿನವೂ ಕಾಣದಂತೆ ಉರುಳುತಿದೆ
ಅರಿತ ಮನವೂ ಅರಿಯದಂತೆ ನಟಿಸುತಿದೆ

ಜಗದಗಲ ಆಗು-ಹೋಗು ನಡೆಯುತಿವೆ
ವನ್ಯಜೀವಿಗಳ ಜೀವನ ಅಯೋಮಯವಾಗಿದೆ

ಬದಲಾವಣೆಯ ಋತುಚಕ್ರ ಸಾಗುತಿದೆ
ಆಡಂಬರದ ಆಟಕೆ ಜಗ ಅಧಃಪತನಕೆ ಹೊರಟಿದೆ

ವೇಗದ ನಡಿಗೆಗೆ ಉದ್ವೇಗ ಹೆಚ್ಚಾಗಿದೆ
ಅರಿವಿನ ಮಾರ್ಗಕೆ ಗುರುವಿಗೆ ಬೆಲೆ ಎಲ್ಲಿದೆ?

ಕೆಸರಿನ ಮನಕೆ ಮೊಸರಂಗಿ ತೊಟ್ಟಿದೆ
ಮಡಿ- ಮೈಲಿಗೆ ಮಾರುದ್ದ ಸರಿದಿವೆ

ತನ್ನ ಹುಳುಕಿಗೆ ಇನ್ನೊಬ್ಬರ ಹುಳುಕು ಮುಚ್ಚಿದೆ
ಕೇಳದೆ- ಹೇಳದೆ ಇರುವ ಪರಿಪಾಠ ಹೆಚ್ಚಾಗಿದೆ

ಪಾಪದ ಕಡಲಿಗೆ ತೀರ್ಥದ ನೀರು ಅಂಜಿದೆ
ಶಕ್ತಿ ಕುಂದಿದೆ ಯುಕ್ತಿಯೂ ಮಾಯವಾಗಿದೆ

ಎಲ್ಲರೂ ಅವರೇ, ಅವರೇ ನಾವಾಗುವುದಾಗಿದೆ
ಹೊಂದಾಣಿಕೆ ಸತ್ಯದ ಬತ್ತಳಿಕೆಯನ್ನು ಮುಚ್ಚಿದೆ

ಕರ್ಮದ ಮುಂದೆ ಧರ್ಮ ಸೊರಗಿದೆ
ಪಾಪದ ಪಿಂಡಕೆ ಸಾಕ್ಷಿ ಇಲ್ಲದಾಗಿದೆ

ಸುತ್ತುವ ಭೂಮಿಗೆ ಸುಸ್ತಾಗುತ್ತಿದೆ
ಬೆಳಗುವ ಸೂರ್ಯನಗೆ ಬೇಜಾರಾಗಿದೆ

ಜಗ ಆಳುವವನ ಕಣ್ಣು ಸದಾ ತೆರೆದಿದೆ
ಹೀಗೆ ಸಾಗಿದರೆ ಮುಂದೆ ತಕ್ಕ ಶಾಸ್ತಿಯಿದೆ

ರಚನೆ: ಎ.ಜಿ.ಕಮತಗಿ(ಶಾಂತಿಪ್ರಿಯ)

- "ಶಾಂತಿಪ್ರಿಯ"

04 Feb 2017, 10:00 am
Download App from Playstore: