ಎದೆಯೂರಿನ ಜಾತ್ರೆ

ಅವಳೆಂದರೆ ಅಲೆಮಾರಿಯ
ರೆಕ್ಕೆ ಮುರಿದು ಹೋದ ತರುವಾಯ
ಪೂರ್ಣ ನಗು ಚೆಲ್ಲಿದವಳು ಈಗೀಗ
ಬಡಿತಕ್ಕೂ ಸುಂಕ ಕೇಳುವವಳು
ಅರೇ..ಕನಸುಗಳೇ ಸಾವಧಾನಿಸಿ
ಅವಳಿನ್ನು ಮುಚ್ಚಿದ ಕವಾಟ ತೆರೆದಿಲ್ಲ

ಜುಮುಕಿಗೆ ಸಿಕ್ಕಿದ ಮುಂಗುರಿಳ ಕಥೆ
ಕೇಳುವಾಗಲೆಲ್ಲ ನನ್ನ ಎದೆಯೂರಿನ
ಜಾತ್ರೆ ಶುರುವಾಗುತ್ತದೆ
ಇವಳೆಂದರೆ ಮಳೆಗಾಲದ ಬಿರು
ಬಿಸಿಲಂತೆ ಪ್ರಶ್ನೆಗೂ ಮೊದಲಿನ ಉತ್ತರ

ಕೈ ಸಂಧಿಯೊಳಗೆ ಬೆರಳನ್ನು
ಬಂಧಿಸೋ ಒಪ್ಪಿಗೆ ಕೊಡದ್ದು
ಒಲವಿನ ಜುಲ್ಮಾನೆ ಹಾಕಬೇಕಾಗುತ್ತದೆ
ನನ್ನೊಳಗಿನ ಒಂಟಿತನ ತೀರಿಸುವವಳಿಗೆ
ಕನಿಷ್ಟ ರಿಯಾಯಿತಿ ಕೊಡಬೇಕೆಂದಿದ್ದೇನೆ..

ಇವಳೂರಿನ ಹಾದಿಗೆ ತುಸು ಬಿಂಕ
ಹೆಚ್ಚಂತೆ ನನ್ನ ಕಣ್ಣಾಲೆಗೂ ಸಿಲುಕದೇ
ಅವಳ ಹೆಜ್ಜೆ ಗುರುತು
ಮಾಯಿಸಿ ಬಿಡುತ್ತದೆ
ನೆರಳಿನ ಸಂಗ ಹಿಡಿಯೋಣವೆಂದರೆ
ಅವಳೊಳಗೆ ನಾನಿನ್ನು ಅಮಾವಾಸ್ಯೆ..

#ಅವಿಜ್ಞಾನಿ

- ಅವಿಜ್ಞಾನಿ

19 Mar 2017, 02:14 pm
Download App from Playstore: