ಬೇಲಿಯ ಕಟ್ಟದಿರು ಬಯಲಿಗೆ.
ತಣ್ಣಗಿನ
ನನ್ನೆದೆಯೊಳಗಿನಿಂದ
ಅದ್ಯಾವ ಸ್ಫೂರ್ಥಿ ಸಿಕ್ಕಿದೆ ನಿನಗೆ?
ಭಾವಗಳ ದಕ್ಕಿಸಿಕೊಂಡು
ಕವಿತೆಯಾಗಿಸುವ ಭರದಲ್ಲಿ
ನನ್ನೊಳಗಿನ ನನ್ನನ್ನೂ ಬಿಡದೇ
ತೆಕ್ಕೆಗೆಳೆದುಕೊಂಡು, ಬದುಕಿನ
ತಿಕ್ಕಾಟಕೆ ಅಣಿಯಾದೆಯಲ್ಲಾ?
ಮತ್ತಾವ ಕವಿತೆಯ ಹುಟ್ಟಿಗೆ
ಕಾರಣವಾಗಿಸುವಿ ನೀ ನನ್ನ...!?
ಇದೇನು ನಿನಗೂ ಹೊಸ ಹಾಡೇನಲ್ಲ,
ನಿತ್ಯದ ಪಾಡು. ಸತ್ಯವ ಮರೆಮಾಚಿ
ಶಕ್ತಪ್ರದರ್ಶನ ಸಲ್ಲದು. ಸಾದ್ಯವಾದರೆ
ಹೊಸ ಕನಸುಗಳ ಬೀಜ ಬಿತ್ತು
ಹೂ,ಕಾಯಿ,ಹಣ್ಣು...
ಬದುಕಿಗೊಂದಿಷ್ಟು ನೆರಳೂ ಸಿಕ್ಕೀತು.
ಬೇಲಿಯ ಕಟ್ಟದಿರು ಬಯಲಿಗೆ.
ನಾನು ಸರ್ವಾಂತರ್ಯಾಮಿ,
ಪ್ರೇಮ ಕಾಮ ವಿರಹ ನೋವು ನಲಿವು
ತವಕ ತಲ್ಲಣಗಳೆನ್ನ ಅಸ್ತಿತ್ವ.
ಹೊಸ ತತ್ವಗಳನು ನಿನ್ನ ಕವಿತೆ
ಹುಟ್ಟು ಹಾಕುವುದಾದರೆ
ಮೊದಲು ನನ್ನ ಗುಡಿಸಲರಮನೆಯ
ಹಿತ್ತಿಲಿನಲ್ಲಿ ಅರಳಿದ ಹೂವಿನ
ಮಾಧುರ್ಯವನು ನೀ ಸವಿದು ನೋಡು.
ಹುಟ್ಟೀತು ಹೊಸ ಹಾಡು...!
- ಚಂದ್ರಶೇಖರ ಮಾಡಲಗೇರಿ.
- ಚಂದ್ರಶೇಖರಮಾಡಲಗೇರಿ
17 May 2017, 08:09 am
Download App from Playstore: