ಮೇಘ.....
ಬರಡು ಭೂಮಿಯ ಮಧ್ಯೆ
ಆಗಸದತ್ತ ಮುಖಮಾಡಿ,
ಒಬ್ಬಂಟಿಯಾಗಿ ಕುಳಿತಿದ್ದಾನೆ
ಬಾರದ ಮೇಘರಾಜನಿಗಾಗಿ ಕಾದು!
ಮೇಘರಾಜನ ಭೂಸ್ಪರ್ಶಕೆ
ಹಸಿರಾಗಿರಲು ಬರಡು ಭೂಮಿಗಳು,
ಹರುಷವುಕ್ಕಿಸಿವೆ ರೈತನ ಮೊಗದಲಿ
ಕೃತಜ್ಞತೆಯ ಬಿಂದುವೊಂದು!
ವಾಯುದೇವನ ಆರ್ಭಟಕೆ
ಧೂಳಿಪಟವಾಗಿವೆ ಗುಡಿಸಲುಗಳು,
ಮೇಘರಾಜನಿಗೆ ಪೈಪೋಟಿಯಂತೆ
ಗುಡುಗು-ಮಿಂಚುಗಳ ಸೆಣಸಾಟ!
ಮೇಘರಾಜನ ರೌದ್ರನರ್ತನಕೆ
ಕೊಚ್ಚಿಹೋಗುತ್ತಿವೆ ಫಸಲುಗಳು,
ಭರವಸೆಗಳ ಹೊತ್ತ ರೈತನ ಕಂಗಳು
ಕಣ್ಣೀರಧಾರೆಯನು ಸುರಿಸುತ್ತಲಿವೆ!
ಮತ್ತೆ ಮೊರೆಹೋಗುತ್ತಿದ್ದಾನೆ
ಕಾಣದ ದೇವರ ಬಳಿ ಇಂದು,
ಮೇಘರಾಜನ ಅಟ್ಟಹಾಸವನು
ಸಾಕು ಮಾಡೆಂದು!
- ಪ್ರಿಯಾಂಕ
23 Aug 2017, 08:12 am
Download App from Playstore: