ಬರ - ಪರಿಹಾರ

ಕರುನಾಡಿನ ರೈತರಿಗೆ ಕುಡಿಯಲು ನೀರಿಲ್ಲ,
ತಿನ್ನಲು ಅನ್ನವಿಲ್ಲ,
ರಾಸುಗಳಿಗೆ ಮೇವಿಲ್ಲ,
ರೆಟ್ಟೆಯಲಿ ಕಸುವಿಲ್ಲ,
ಮಾಡಲು ಉದ್ಯೋಗವಿಲ್ಲ,
ಗುಳೆ ಹೊರಟ ಜನರಿಗೆ ಸಾಂತ್ವನ ಹೇಳುವವರಿಲ್ಲ, ಕೇಳುವವರಿಲ್ಲ!


ಅಭಿವೃದ್ದಿಯ ಹೆಸರಿನಲಿ ಮರಗಳನು ಕಡಿದರು, ಗಣಿಗಾರಿಕೆಗಾಗಿ ವಸುಂಧರೆಯ ಒಡಲನ್ನು ಬಗೆದರು,
ಕೆರೆ ಕಟ್ಟೆಗಳನ್ನು ನಿವೇಶನಗಳನ್ನಾಗಿಸಿದ ಭೂ ಒತ್ತುವರಿದಾರರನ್ನು,
ಕಾಡುಗಳ್ಳರನ್ನು ಹಿಡಿಯುವವರಿಲ್ಲ, ಕೇಳುವವರಿಲ್ಲ!

ನೀರಿಗಿಲ್ಲ ತತ್ವಾರ, ಸಹಜ ಬಿಸಿಲು ಇದು ಬರವಲ್ಲ ಎಂದೊಬ್ಬ ಮಂತ್ರಿಯ ವ್ಯಾಖ್ಯಾನ,
ಬರವಲ್ಲವಿದು ಬರಿಯ ಬಿಸಿಲದಿಕವಷ್ಟೇ ಎಂದು ಮತ್ತೊಬ್ಬ ಬೃಹಸ್ಪತಿಯ ಸಾಂತ್ವನ, ಬರಪರಿವೀಕ್ಷಣೆಗೆ ಬರುವ ಮುಖಂಡರನ್ನು  ಸ್ವಾಗತಿಸಲು, ಇದ್ದ ಬದ್ದ ನೀರನ್ನೂ ರಸ್ತೆಗೆ ಚೆಲ್ಲುತ್ತಿರುವವರನ್ನು ತಡೆಯುವವರಿಲ್ಲ  ಕೇಳುವವರಿಲ್ಲ!

ಅನುದಾನ ಬಿಡುಗಡೆಯಲ್ಲಿ ಕೇಂದ್ರದ ಪಕ್ಷಪಾತವೆಂದು ಆಡಳಿತ ಪಕ್ಷದವರ ಆರೋಪ,
ಕೊಟ್ಟ ಹಣ ಸರಿಯಾಗಿ ವಿನಿಯೋಗಿಸಲಿಲ್ಲವೆಂದು ವಿರೋಧ ಪಕ್ಷದವರ ಪ್ರತ್ಯಾರೋಪ,
ಇದರ ಮದ್ಯೆ, ತಮ್ಮ ಹೊಗಳು ಭಟ್ಟರು, ವಂದಿಮಾಗದರಿಗೆ ಕೈ ತುಂಬಾ, ಹೊಟ್ಟೆ ತುಂಬಾ ಅನುದಾನದ ಹಣ ಹಂಚಿಕೊಳ್ಳುತ್ತಿರುವುದನ್ನು ತಡೆಯುವವರಿಲ್ಲ,
ಕೇಳುವವರಿಲ್ಲ!

ಹುಚ್ಚುಮುಂಡೆ ಮಧುವೆಯಲ್ಲಿ ಉಂಡವನೇ ಜಾಣ, ಬರಪರಿಹಾರದ ನೆಪದಲ್ಲಿ ಬಾಚಿಕೊಂಡವನೇ ಜಾಣ,
ಜನಸಾಮಾನ್ಯರಿಗೆ ಕುಡಿಯಲು ನೀರಿಲ್ಲ, ರಾಸುಗಳಿಗೆ ತಿನ್ನಲು ಮೇವಿಲ್ಲ, ಗುಳೆಹೊರಟ ಜನರನ್ನು ತಡೆಯುವವರಿಲ್ಲ,
ಸಾಂತ್ವನ ಹೇಳುವವರಿಲ್ಲ!

ಡಾ!ಸಿ.ಮುರಳೀಧರ. ಏಪ್ರಿಲ್, 2016

- ಡಾ!ಸಿ.ಮುರಳೀಧರ

27 Sep 2017, 10:43 pm
Download App from Playstore: