ಕಾಡು ಮತ್ತು ಮಾನವ
ಮಾನವ ಹೊತ್ತು ಉರಿಯುತಿದೆ ಧರೆ
ಇದು ನಿನ್ನ ಜೀವಕ್ಕಿದ್ದ ಮೂಲ ಆಸರೆ
ಕಳಚು ಇಂದೇ ನಿನ್ನ ಬುದ್ದಿಗಂಟಿರುವ ಪೊರೆ
ನೀನಿಡುವ ಮುನ್ನ ಬದುಕಿಗಾಗಿ ಸಹಾಯದ ಮೊರೆ
ತಲೆಗೇರಿದೆ ಆಧುನಿಕ ಐಷಾರಾಮಿ ಜೀವನದ ನಿಶಾ
ಮಾಡುತಿದೆ ಅದು ಇಡೀ ಮಾನವ ಸಂಕುಲವ ನಾಶ
ನಿನ್ನ ದುರ್ಮಾರ್ಗವಾಗಿದೆ ಇತರೆ ಜೀವಿಗಳಿಗೂ ಪಾಶ
ಎಚ್ಚೆತ್ತುಕೊ ಭೂ ಸಂಕುಲವೇ ತಲುಪುವ ಮುನ್ನ ವಿನಾಶ
ನಾಡು ಕಟ್ಟುವೆನೆಂದು ಮಾಡಿರುವೆ ಕಾಡುಗಳ ಹರಣ
ಕಡಿದ ಕಾಡು ಜೊತೆಗೆ ಸೆಳೆದು ಹೋಯ್ತು ಜೀವಿಗಳ ಪ್ರಾಣ
ಹಿಂದೆ ನಿಂತು ಕಾಪಾಡಿದ್ದ ಜೀವಿಗಳ ಸಾವು ಮಾಡಿದೆ ನಿನ್ನ ನಿತ್ರಾಣ
ಉಳಿಸವುಗಳ ನೀನು ಕೂಡ ಹೊಂದುವ ಮೊದಲೆ ಮರಣ
ಎಷ್ಟು ತುಂಬಿಟ್ಟಿದ್ದರೂ ನೀನು ಧನ ಕನಕ
ತಂದುಕೊಡುವುದಿಲ್ಲ ಉಸಿರಾಡಲು ಆಮ್ಲಜನಕ
ಎಲ್ಲಿ ನೋಡಿದರು ತಲೆ ಎತ್ತಿದೆ ಕಾಂಕ್ರೀಟ್ ಕಾಡು
ಮುಂದೆ ನಿನಗಿದೆ ನರಕ್ಕಿಂತಲೂ ಕೆಟ್ಟದಾದ ಪಾಡು
ಹನಿ ನೀರಿರದೆ ಒಡಲ ಬಿರಿದು ಭುವಿ ತಬ್ಬಿರುವಳು ನೋವ
ಇನ್ನೆಲ್ಲೋ ನಿಲ್ಲದೆ ಧೋ ಎಂದು ಸುರಿದು ಮಳೆ ತಂದಿದೆ ಸಾವ
ಅತ್ತೆಲ್ಲೋ ಜೀವ ಹೊತ್ತೊಯ್ಯುವ ರವಿ ಬೀಸಿ ಬಿಸಿಲ ಚಾಟಿ
ಈ ನೋವು ಸಾವಿನ ಕೃತ್ಯಕ್ಕೆಲ್ಲ ನೀನೇನೆ ಮೂಲ ಮೇಟಿ
ಕರಗುತ್ತಿದೆ ಮಂಜು ಹನಿಯ ರೂಪ ತಾಳಿ
ಹನಿ ಸೇರಿದೆ ಕಡಲ ಕೊಲ್ಲಲು ನಿನ್ನ, ಅಹಂಕಾರವ ಸೀಳಿ
ನಿಸರ್ಗ ವಿಕೋಪಗಳು ತೋರುವ ಮುನ್ನ ತಮ್ಮ ಪ್ರತಾಪ
ತಣಿಸು ನೀನು ಈ ಧರೆಯ ವಾತಾವರಣದ ಬಿಸಿಯ ತಾಪ
ನಿನಗಿಲ್ಲ ಉಳಿವು ನೀನೊಬ್ಬನೆ ಬದುಕಿದರೆ ಭೂಮಿ ಮೇಲೆ
ನಿನಗುಳಿವು ಇರವುದು ಉಳಿದರೇನೆ ಎಲ್ಲ ಜೀವ ಸೆಲೆ
ನಿನ್ನ ಸಾವಿನ ಮನೆಗೆ ನೀನೆ ತೋಡುತ್ತಿರುವೆ ಹಳ್ಳ
ತಿಳಿ ನೀನಂಬಿ ಹೊರಟ ಬಾಳ ದಾರಿಯಲಿ ತುಂಬಿರೋ ಜೊಳ್ಳ
ನೀನೇನೆ ಸೃಷ್ಟಿಸೂ ಪ್ರಕೃತಿಯ ವಿರುದ್ಧ ಅದೆಂದಿಗೂ ಕೃತಕ
ನಿನ್ನುಳಿಸಲು ಅವುಗಳ ಉಳಿವು ಅತೀ ಕ್ಷಣಿಕ
ಕೊಡಲಾರವು ಪ್ರಾಕೃತಿಕ ಸಮತೋಲನಕ್ಕೆ ಬೇಕಿರುವ ತೂಕ
ಈಗಲಾದರೂ ನಿನ್ನ ನೀನು ಕಾಪಾಡಿಕೋ ಕಾಡ ಬೆಳೆಸಿ ಉಳಿಸುವ ಮೂಲಕ
- ಶ್ರೀಕಾವ್ಯ
29 Oct 2017, 10:50 pm
Download App from Playstore: