ಹಣತೆ

ಎತ್ತಲು ಮುಸುಕಿದೆ ಗಾಢಾಂಧದ ಕತ್ತಲೆ
ಈ ತಮದೊಳಗೆ ಸಮಾಜವೇ ಬತ್ತಲೆ
ನನಸಾಗಲಿಲ್ಲ ಮಹನೀಯರ ಕನಸು
ಬಡವರು ದೀನರು ಆದರು ಬಲಿಪಶು

ಸರ್ವವ ವ್ಯಾಪಿಸಿದೆ ಕೋಲೆ ಬಸವಗಳ ಗುಟುರು, ಕಾಕು
ಹಿಂದೆಯೆ ನಡೆದಿದೆ ಅಹಂಕಾರದ ಗದ್ದುಗೆಯ ಪರಾಕು
ಹಿಂಬಾಲಕರಿಗೆಲ್ಲ ಅಧಿಕಾರದ ರಕ್ಷಾ ಕವಚದ ಬಾಳು
ರಕ್ಷಕರೆಲ್ಲಾ ಎಂಜಲಿಗೆ ಬಾಯ್ಬಿಡುವ ಕಾಲಡಿಯಾಳು

ನೋಟ ಬೀರಿದಲ್ಲೆಲ್ಲಾ ನಾನು ನನ್ನದೇ
ನನ್ನ ಬಿಟ್ಟು ಜಗದಲಿ ಏನಿದೆ?
ಕ್ಷಣಕ್ಷಣಕೂ ಬಲಿಯುತಿದೆ ಅದ್ವಿತೀಯನಾಗುವ ಸ್ವಾರ್ಥ
ಸಾವಿರ ಪ್ರಾಣಗಳುಸಿರುಗಟ್ಟಿದರು ಸರಿಯೇ
ದೇಶವನ್ನೆ ದೋಚಿ ಮಾರುವುದಾದರೂ ಸರಿಯೇ

ಎಡಬಿಡದೆ ನಡೆದಿದೆ ಅತಿಕ್ರಮ ಅತ್ಯಾಚಾರ
ಸಿಕ್ಕಿದ್ದನ್ನೆಲ್ಲ ತೆಗೆದು ಬಗೆದು ಸಿಗಿದು ಅಗೆದು ತಿನ್ನುವಷ್ಟು
ಇವರ ಕಣ್ಣಿಗೆ ಬಿದ್ದು ಸತ್ತವರೆಷ್ಟೋ, ಸೊರಗಿದವರೆಷ್ಟೋ?
ತನ್ನನ್ನೆ ಕೊಟ್ಟು ಗಂಟು ಕಟ್ಟಿಕೊಂಡವರೆಷ್ಟೋ?

ಆಚಾರದ ನೆರಳಲ್ಲಿಯೇ ಅನಾಚಾರ
ಅಡಿಅಡಿಯಲ್ಲಿಯೂ ಬೆಳೆದಿದೆ ಭ್ರಷ್ಟಾಚಾರ
ಇನ್ನೆಲ್ಲಿದೆ ಸಂಸ್ಕೃತಿಯ ಶಿಷ್ಟಾಚಾರ
ನಡೆದದ್ದು,ನಡೆಯುವುದೆಲ್ಲ ಅಗೋಚರ

ಹೆಜ್ಜೆ ಇಟ್ಟಲ್ಲೆಲ್ಲ ಬರೀ ಆಶಾಭಾವದ ಸೋಗು
ಎಂದಿಗೂ ನಿಲ್ಲದು ನೊಂದವರ ಕೂಗು
ದೇಶದೆಲ್ಲೆಡೆ ತುಂಬಿದೆ ಜಾತಿಯ ರಾಜ್ಯ
ನಿಜವಾಗಿಯೂ ಲಭಿಸಿದೆಯೇ ನಮಗೆ ಸ್ವರಾಜ್ಯ?

ದೇಶದ ಬೆನ್ನೆಲುಬು ರೈತ
ಇಂದು ಅವನ ಸ್ಥಿತಿ ಬರೀ ಜೀತ ಜೀತ
ದೇಶಕಾಗಿ ದುಡಿದು ದುಡಿದು ಸೋತ
ಇಂದಾಗಿದೆ ಅವನ ಬಾಳು ವಿಪರೀತ

ಒಂದೆಡೆ ಅನ್ನಕ್ಕಾಗಿ ಕ್ರಾಂತಿ ಕ್ರಾಂತಿ
ಒಂದೆಡೆ ಅಜೀರ್ಣದ ವಾಂತಿ
ಅನಾಥರ ನಿರ್ಗತಿಕರ ಹಾಹಾಕಾರ
ಬೇಕಿದೆ ಇದಕೆಲ್ಲ ಪರಿಹಾರ

ಈ ಎಲ್ಲಾ ಆಟಗಳ ಆಡುಂಬೋಲ
ಬೆಳಕಿದ್ದರೂ ಕತ್ತಲೆಯಾಗಿರುವ ಸಮಾಜ
ಈ ಕತ್ತಲೆಯಲ್ಲಿ ಹತ್ತುವುದೇ ಬೆಳಕಿನ ದೀಪ

- Kumara.C

31 Oct 2017, 07:53 pm
Download App from Playstore: