ಅವಳ ಬರುವಿಕೆಗಾಗಿ
ಕಾಯುವಿಕೆ ಇನ್ನು ವ್ಯರ್ಥ!?
ಅದೆಷ್ಟು ಹಗಲು ರಾತ್ರಿಗಳು
ಸಾಕ್ಷಿಯಾದವೋ ಲೆಕ್ಕವೇ ಇಲ್ಲ.
ಅವಳ ಮನ, ಮನೆಯ ಬಾಗಿಲು
ಬಡಿಯುತ್ತಲೇ ಇದ್ದೆ.
ಬಹುಶಃ ನನ್ನೆದೆಬಡಿತ
ಅವಳಿಗೆ ಕೇಳದಾಯಿತು..!
*
ಈಗವಳು
ಕಾಲಗೆಜ್ಜೆಯ ಬಿಚ್ಚಿಟ್ಟಿದ್ದಾಳೆ,
ನಾಜೂಕಾಗಿ ಹೆಜ್ಜೆ ಹಾಕುತ್ತಿದ್ದಾಳೆ.
ನಾನ್ಯಾವತ್ತೋ ಸತ್ತಿರುವೆನೆಂಬ ಸತ್ಯ
ಬಹುಶಃ ಅವಳಿಗೆ ತಿಳಿಯದಾಯಿತು.
*
ನನ್ನ ಆತ್ಮ ಮತ್ತು
ಅಂತರಾತ್ಮದ ದೇವತೆಯಾಗಿದ್ದವಳು,
ಆರಾಧನೆಯನು ವಿರೋಧಿಸಿದಾಕೆ.
ನನ್ನ ಸವಿನೆನಪುಗಳ ಅಂತ್ಯ-
ಕ್ರಿಯೆಗಾಗಿ ಕುಳ್ಳು ಕಟ್ಟಿಗೆಯ ಮೇಲೆ
ನನ್ನ ಕೂರಿಸಿ ಅಂತಿಮ ನಮನ
ಹೇಳುತ್ತಿರುವಾಕೆಯ ಹೊಟ್ಟೆ ತಣ್ಣಗಿರಲಿ.
*
ಮಣ್ಣಲ್ಲಿ ಮಣ್ಣಾಗುವ
ಮಸಣವೆಂಬ ಮನೆಗೆ
ಗೃಹಪ್ರವೇಶದ ಕಾರ್ಯ, ನೀವದನ್ನು
ಅಂತಿಮ ನಮನವೆನ್ನುವಿರಿ.
ಪ್ರೇಮದ ಗೋರಿಯೊಳಗಿನ
ನನ್ನ ನೋವುಗಳಿಗೆ ಲೆಕ್ಕ
ಅವಳೇ ಕೊಡಬೇಕು...!
*
ಕನಸುಗಳೇ
ದಯವಿಟ್ಟು ಕಸಿಯದಿರಿ
ನನ್ನ ನಿದಿರೆಯ, ಅವಳ
ಕಾಲಿಗೆ ಗೆಜ್ಜೆಯ ಕಟ್ಟದಿರಿ.
ಅವಳು ನಡೆದು ಬರುವಾಗೆಲ್ಲ
ಘಲ್ಲೆನುವ ನಾದಕೆ ಸ್ವರ್ಗದ ಬಾಗಿಲೊಂದು
ತಂತಾನೇ ತೆರೆದು
ನನಗೆ ಮರುಹುಟ್ಟು ಕರುಣಿಸದಿರಲಿ.
*
ನಾ ಕೊಟ್ಟ ಹೂವು,ಕುಂಕುಮ,
ಒಂದಿಷ್ಟು ಪ್ರೇಮವ
ಗಾಳಿಗೆ ತೂರಿ ನಿಂತವಳು.
ನನ್ನ ಸಮಾಧಿಯ ಮೇಲಿಟ್ಟ
ಹೂವಿಗೆ ಮುತ್ತಿಟ್ಟು ಹೋದಳು,
ತಿರುಗಿ ನೋಡಿದ್ದರೆ ಗೊತ್ತಾಗುತ್ತಿತ್ತೇನೋ
ಗುಲಾಬಿಯೊಂದು ರಕ್ತಕಾರಿದ
ಕಹಿಸತ್ಯ...!
ಗುರಿಯಿಟ್ಟು ಹೊಡೆದಳು
ಹೃದಯಕ್ಕೆ, ಗೋರಿ ಕಟ್ಟಿ
ಮೇಲೊಂದಿಷ್ಟು ಹೂವಿಟ್ಟಳು.
*
ನಿಯಮಾನುಸಾರ ಬದುಕು
ಸಾಗುತ್ತಲೇ ಇತ್ತು, ಗಡಿಯಾರವೇಕೋ
ಟೈಮ್ ಸೆನ್ಸ್ ಕಳೆದುಕೊಂಡಿತ್ತು.
*
ಜೀವನ ರಥಕೆ ಚಕ್ರಗಳ ಜೋಡಿಸಿ
ರೋಧಿಸಿದಳು,ಹಗ್ಗ ಹಿಡಿಯಲು
ನೂರು ಜನ ಸೇರಿ ಜಾತ್ರೆಯೇ ನೆರೆಯಿತು.
ಯಾರು, ಯಾರು ಹೇಳಿದರು ನಿನಗೆ
ಈ ಪ್ರೀತಿ ಕತೆಯ? ನಿನ್ನ ಹುಟ್ಟಿನ ಮೂಲ
ಬಚ್ವಿಟ್ಟಷ್ಟೂ ಬೆಟ್ಟದಷ್ಟು ಬೆಳೆಯುತ್ತಿದೆ,
ಸಮಾಜ ಬೊಬ್ಬಿರಿದು ಹೇಳುತ್ತಿದೆ
ಯಾವ ಸೂಳೆಯ ಮಗನೋ ನೀನು..?!
ಎರಡೂ ಕೈ ಸೇರಿ ಚಪ್ಪಾಳೆ, ತಪ್ಪುಗಳ
ತಿದ್ದಿಕೊಂಡು ನಡೆವ ದಾರಿಗುಂಟ
ಅನುಮಾನಗಳ ಮೈಲಿಗಲ್ಲು.
ಬಿಟ್ಟು ಹೋದನೋ? ಬಿಟ್ಟು ಬಂದಳೋ?
ಅಗಲಿದ್ದಷ್ಟೇ ಸತ್ಯ. ಆಮೇಲೆ ಹುಟ್ಟಿದ್ದು
ನೀನು. ಯಾವ ಸೂಳೆಯ ಮಗನೋ?
ಯಾರು
ಹೇಳಿದರು ನಿನಗೆ ಈ ಪ್ರೀತಿ ಕತೆಯ?
ಸುಳ್ಳುಗಳು ಜೋಡಿಸಿಟ್ಟ ಕಡ್ಡಿಪೆಟ್ಟಿಗೆ...
ಸಣ್ಣ ಬೆಂಕಿಯೇ ನಿಜ, ತನ್ನ
ಮನೆಯ ಸುಟ್ಟೀತೆಂದು
ಮಡಿಲೊಳಗೆ ಕಟ್ಟಿಕೊಂಡು ಅವಳು
ತಾಯಿಯಾದಳು, ನೀನೆಂಥ ಮಗನಾದೆ?
ಎರಡು ದೇಹಗಳು ಮನಸಾರೆ ಬೆರೆತಾಗ
ಬೆವರುಂಡು ಬೆಳೆದ ಮುದ್ದಿನ ಮಗ ನೀನು,
ಬದುಕು ಬದಲಾದಂತೆಲ್ಲ ನಿನ್ನಪ್ಪನಿಗೂ
ಮೊಸದ ಕೊಡಲಿ ತಲೆಯನೇ ಕತ್ತರಿಸಿತು,
ವಿಷವಾದ ಎದೆಹಾಲನೇ ನೀ ದಕ್ಕಿಸಿಕೊಂಡೆ.
ಸತ್ಯ ಸಮಾಧಿಯಾಯ್ತು. ಅರಿಯದೇ
ಬದುಕಿ ನೀನು ಸೂಳೆಯ ಮಗನಾದೆ.
ನಾನು ಸರ್ವಾಂತರ್ಯಾಮಿ,
ಪ್ರೇಮ ಕಾಮ ವಿರಹ ನೋವು ನಲಿವು
ತವಕ ತಲ್ಲಣಗಳೆನ್ನ ಅಸ್ತಿತ್ವ.
ಹೊಸ ತತ್ವಗಳನು ನಿನ್ನ ಕವಿತೆ
ಹುಟ್ಟು ಹಾಕುವುದಾದರೆ
ಮೊದಲು ನನ್ನ ಗುಡಿಸಲರಮನೆಯ
ಹಿತ್ತಿಲಿನಲ್ಲಿ ಅರಳಿದ ಹೂವಿನ
ಮಾಧುರ್ಯವನು ನೀ ಸವಿದು ನೋಡು.
ಹುಟ್ಟೀತು ಹೊಸ ಹಾಡು...!
ಭದ್ರ ಕವಚದ ವಜ್ರದ ಹರಳು..ಕಂದನಿಗೆ ಪಂಜರ ಹಾಕಿದ ತಾಯಿಯ ಕರಳು..ಶೋದಿಸಿ -.ಭೋದಿಸಿ ಬೆಳೆಸಿದವಳು..ತುತ್ತು ಮಾಡಿ ಉಣಿಸಿದವಳು ಕೈಯಿಂದ ಹಿಡಿದು ಕೈಬೆರಳು..ಸದಾ ತಾಯಿಯ ಪ್ರೀತಿ ಮಗುವಿಗೆ ನೆರಳು....ತಾಯಿಯ ದಿನದ ಶುಭಾಶಯಗಳು...