ತನುವ ತಿಪ್ಪಿಯ ಗುಂಡಿ ಮಾಡಿಕೊಂಡು
ಮನವ ಮಂಡ ಗುದ್ದಲಿ ಮಾಡಿಕೊಂಡು
ಅಗೆದು ಬಗೆದು ಹಡ್ಡಿ ಹುಡುಕಿದರೆ
ದುಷ್ಟ ದುರಹಂಕಾರದ ಹುಳ-ಹುಪ್ಪಟೆಗಳು ಎದ್ದುಬಂದವು
ಇಂತಹ ಹುಳುಗಳನ್ನು ಕ್ಷಮಿಸಿ ಮುಕ್ತಿ ಕೊಡಿಸು ಗುರು ಬಸವ ಪ್ರಿಯ ರೇವಣಸಿದ್ದೇಶ್ವರ.
ರಚಣೆ: ಸಿದ್ದುಗೌಡ
ಕೃಪೆ: ಎಲ್ಲ ಶರಣರು.
ಮೊಬೈಲ್:7892256063
ಮುಕ್ತಗಳು
-------------------------------
೦೧.ಭಾವಲಹರಿ
______________________
ತನು ಒಂದಾರೂ ಅದರೊಳಗೆ
ಭೂಕಂಪ,ಸಮುದ್ರ ಸುನಾಮಿ
ಸೃಷ್ಟಿಸಲೆಂದೇ ಇರುವ
ಹಲವು ರೀತಿಯ ಮನಗಳು
ಇರುವುದೊಂದೇ ಭಾವಲಹರಿ
ಎಲ್ಲರೆದೆಯ ಕುಟ್ಟಲು.
೦೨.ನಾಲಿಗೆ
--------------------
ನಮ್ಮ ಮನೆಯ ನಾಯಿಯದು
ಚಪಲ ವಾಂಛೆಯ ಹಿತ್ತಲು
ಕುರುಡು ಕಿವುಡು ಎಲ್ಲ ಇಹುದು
ರಸವ ನೆಕ್ಕುವುದು ಸುತ್ತಲು
ಸಿಕ್ಕ ಸಿಹಿ,ಕಾರ,ಹುಳಿಯ ಸವಿದು
ಕಹಿಯ ಬಲ್ಲ ನಾಲಿಗೆ.
೦೩.ಕವಿಗಳು
______________
ಇವರು ಎತ್ತು ,ಇವರು ಎಮ್ಮೆ
ರಥವ ಹಿಡಿದು ಎಳೆವರು
ನಾಡ ನುಡಿಯ ಹಿರಿಮೆ ಗರಿಮೆ
ಎಲ್ಲ ಮಹಿಮೆಯ ತಿಳಿವರು
ಲೆಕ್ಕವಿಲ್ಲದ ಪದ-ಪದ್ಯ-ಗದ್ಯರಚನೆ ಬಲ್ಲರು
ಉರಿಯ ನುಂಗಿ ತಂಪು ಹಿಂಗಿ
ಹಾಲು ಹಿತವ ಕೊಡುವರು
ಎದೆಗೆ ಹೊಕ್ಕ ಸಿಕ್ಕ ವಿಷವ
ಬಿಕ್ಕಿ ಬಿಕ್ಕಿ ಕಕ್ಕುವರು
ಓದು- ಬರಹ ಬಲ್ಲರವರು
ಖಡ್ಗ ಲೇಖನಿ ಹಿಡಿವರು
ಯಾರಿಗುಂಟು ಯಾರಿಗಿಲ್ಲ
ಅಕ್ಷರ ತೆನೆ ತುರುಕುವವರು
ಇವರೇ ನಮ್ಮ ಗಣಪ-ಬಳಪ
ಲಕ್ಷ್ಮಿ- ಸರ್ವಸ್ವ ನುಡಿವರು
ಮುಂಬರುವ ಪೀಳೆಗಗೆ ಎದೆಹಾಲು ನೀಡುವರು
ಇವರೇ ನಮ್ಮ ಕವಿಗಳು ನಾಡ ನುಡಿಯ ಕಲಿಗಳು.
೦೪. ರಾಜಕಾರಣಿಗಳು
________________________
ನಾಡನೊಡೆವ ಮಂದಿ ಇವರು
ನಮ್ಮ ನೆಲವ ಬಲ್ಲರು
ನಮ್ಮ ಮತವ ಗೆಲ್ಲುವನಕ
ಛಲದಿ ಬಿಡದೆ ಮೆರೆವರು
ನಲಿವ ನಮ್ಮ ನಾಡದೇವಿಯ
ಕೊರಳ ಹಾರವ ಕದಿವರು
ಒಲಿದ ನೆರಳಿನಲ್ಲಿ ಕಳುವು
ಇವರ ಕಾಯಕ ಎಂದಿಗೂ
ಅಂದಿಗಿಂದಿಗೆಲ್ಲ ಇವರೆ ಭಾರತವ ಆಳಿದವರು
ಕೆಳವರ್ಗದವರನೆಲ್ಲ ನೆತ್ತಿ ಹಿಂಡಿ ಬಿಡುವರು
ದಲಿತರಾದಿಯಾಗಿ ಇವರ ತುದಿಯನೆಲ್ಲ ಬಲ್ಲರು
ಕೊಟ್ಟುದೊಂದು ಪಡೆವರೈದು
ಬ್ರಷ್ಟಹಿತವ ಹೊಂದಿದವರು
ಇವರೆ ನಮ್ಮ ರಾಜ್ಯ ರಾಜರೆಂದು
ಉಲಿದು ಮೆರೆವರು ವೋಟು ನೋಟು
ಎಲ್ಲ ತಿಂದು ಜನರ ಹಿತವ ಮರೆತರು.
ಬೆಳಗು ಕವಿತೆ( ಮಾತೃ ಸ್ವರೂಪ)
----------------------------------
ನಿನ್ನೊಡಲ ಧ್ವನಿಯಾದ ನನಗೆ
ಹೂ ಬಿಡುವ ಯೌವ್ವನ;
ಮಕರಂದ ಸವಿಯಲು ಇನ್ನೂ ಬಾರದ
ದುಂಬಿಯ ಮೌನ ಮೀರಿದ ಗಾನಯಾನ.
ನಿನ್ನಂತರಂಗಕ್ಕೊಂದು ನೆನಪಿನ ಚುಕ್ಕೆ ನಾನು
ಹೊಳಪು ನೀಡಿದ ನಿನ್ನ ವಾತ್ಸಲ್ಯ
ಚಿದಾಕಾಶದಲ್ಲಿ ಕೋಟಿ ನಕ್ಷತ್ರಗಳ ಮೆರಗು
ಗೆಲ್ಲುವ ಪ್ರತಿ ರಂಗದಲ್ಲೂ ನಿನ್ನದೇ ಹೆಸರು.
ನಾನಾಡುವ
ಪದ-ಶಬ್ಧಗಳ ಸಂಯೋಜನೆಗೆ
ವೀಣೆ ನುಡಿಸುವ ಆ ನಿನ್ನ ಹೃದಯ ದ್ವನಿ;
ಮೃದಂಗದ ಅಲೆಗಳು ಕಿವಿಗೆ ಅಪ್ಪಳಿಸಲು
ಹುದುಗಿ ಹೋಗಿದ್ದವು ಆ ನಿನ್ನ ನುಡಿಗಳು.
ಬಿದ್ದು ಎದ್ದಾಗಲೊಮ್ಮೆ
ಹೆಚ್ಚಾಗುತ್ತಿರುವ ಈ ಬದುಕಿನ ಭಾರ ಕಳೆಯಲು
ಶೃತಿ ಹಿಡಿದು ತಾಳ ಹಾಕುತ್ತಿದೆ
ಸೂರ್ಯನ ಬೆಳಕಿನಲ್ಲಿ ಮಂದವಾಗಿ
ಇನ್ನೂ ಕಾಣದ ನಕ್ಷತ್ರದಂತೆ ಆ ನಿನ್ನ ನಗು.
ಹಿಂದಿನ ಜನುಮದ ಇಂದಿನ ಋಣ
ನಾನಾಗಿದ್ದೇನೆ ನಿನ್ನ ಮಗು
ಹಸಿರಾಗಿ,ಹೆಸರಾಗಿ,ಎದೆಯುಸಿರು ನೀನಾಗಿ
ತೆನೆಭಾರ ಹೊತ್ತ ಸಸಿಯಂತೆ ಆ ನಿನ್ನ ತಾಳ್ಮೆ
ಬಾನೆತ್ತರಕ್ಕೆ ಬೆಳೆದರೂ; ವಂದಿಸಲೇಬೇಕು
ಕ್ಷಮಯಾಧರಿತ್ರಿ ನೀನು ನನಗೆ.
ನಿನ್ನೊಟ್ಟಿಗೆ ( ಕವಿತೆ)
---------------------------
ನಕ್ಕು ಬಿಡು ಒಮ್ಮೆ
ನಿನ್ನೊಡನೆ; ನನ್ನ ಕಡು ಕಷ್ಟಗಳು
ಮಾತನಾಡುತ್ತಿವೆ;ದೂರ ಸರಿದರೂ
ಪ್ರತಿ ಬಾರಿ ಮೈಕೊಡವಿ
ಎದ್ದು ನಿಲ್ಲುತ್ತವೆ.
ನಕ್ಕಾಗಲಾದರೂ
ಬಾರದ ಬಿಕ್ಕಳಿಕೆ ಬಂದು ಬಿಡಲಿ.
ಅಮೃತ ತತ್ವಗಳೇ ಮರೆತುಹೋಗಿವೆ
ನೀ ನನ್ನ ಮರೆತಂತೆ;ಅಂದಿನ ಕಷ್ಟಗಳು
ಮರೆತು ಬಿಡಲಿಲ್ಲ ನನ್ನನ್ನು;
ಆಗಲಾದರೂ ಸಿಗಬಹುದು
ಎಂಬ ಹುಸಿ ಬರವಸೆ
ನನಗೆ.
ನಿನ್ನ ಕಣ್ಣ ಮುಂದಿನ ಜಗತ್ತು
ಆ ನನ್ನ ಮಕ್ಕಳು ;
ನೋಡಬಾರದೇ ಒಮ್ಮೆ
ಅವರ ನಲಿವುಗಳನ್ನು;
ನಿನ್ನನ್ನು ಸಂತೈಸುವ
ಹಾರೈಕೆ ಮಾತ್ರ ನನ್ನಲ್ಲಿದೆ
ದೇವರ ಮುಂದಿಟ್ಟ ಅಗರಬತ್ತಿಯಂತೆ,
ಇಂದು ನೀನು ನನಗೆ.
ಅಳಲು ನಿನ್ನಲ್ಲಿ ಕಣ್ಣೀರು
ಉಳಿದಿಲ್ಲ ಒಂದು ಹನಿ,
ಅಳಲೇಬೇಕಾದ ಅನಿವಾರ್ಯತೆ
ನಿನ್ನಲ್ಲಿದ್ದರೆ;ನಾ ಅಳಿದ ಮೇಲೆ ಅಳು.
ಅಳುವಿನ ಹಿಂದಿನ ನಗು
ಆಗಲಾದರೂ
ತಿಳಿದೀತು ನಿನಗೆ.