Kannada Poems

Download App from Playstore. | Privacy Policy


Deprecated: Creation of dynamic property my_pagination::$conn is deprecated in /home4/airpoiy2/kannadakavana/pagination.php on line 41

ಒಬ್ಬಂಟಿ ಆದ ನಂತರ

ಕೆರೆಯ ಏರಿಯ ಮೇಲೆ
ನೀ ಇಟ್ಟ ಹೆಜ್ಜೆ ಗುರುತದು
ಮೂಡಿ ಬಂದಿತೇ
ನನ್ನಯ ಎದೆಯ ಒಳಗೆ!!

ಗಾಳಿ ಬೀಸುವ ಮುನ್ನ
ಸೊರಗಿದ ತರಗೆಲೆಯು
ಉದಿರಿತೇ ನೀ ಹಿಂದಿರುಗಿ
ಬಾರದಿರುವುದನ್ನು ಅರಿತು!!

ಬಡಪಾಯಿ ಹೃದಯದಲ್ಲಿ
ಬರಗಾಲದ ದಿನವಿಂದು
ಗೆಳತಿ ನೀ ದೂರಾಗಿ
ನಾ ಒಬ್ಬಂಟಿ ಆದ ನಂತರ!!

- ಪಿ.ಜಿ.ಜ್ಯೋತಿ

17 Mar 2018, 06:30 pm

ವೀಣೆಯು ಕಣ್ಣ ತೆರೆಯಿತು

ವೀಣೆಯು ಕಣ್ಣ ತೆರೆಯಿತು
ಕವಿಯ ಮನವನು ಕಲುಕಲು!!
ಸಂಜೆಯು ರಂಗೇರಿತು
ಭುವಿಯ ಗಮನವ ಸೆಳೆಯಲು!!

ಹೊಸತು ಗಾನ ಕವಿಯ ಕವನ
ರಾಗ ತುಂಬಿ ಹರಿದು ತನನ!!
ಸಂಜೆಯಲ್ಲಿ ನಗುವ ಭುವನ
ಕಂಡು ಹರುಷದಿ ನಲಿದ ನಯನ!!

ತಂತಿ ಮೀಟುವ ಮುನ್ನ ಭಾವವು
ಜೀವ ತಳೆಯಿತು‌ ಕವನದಿ!!
ಸಂಜೆ ಕತ್ತಲು ಕವಿಯುವ ಮುನ್ನ
ಹೊನ್ನ ಸುರಿಮಳೆ ಗಗನದಿ!!

- ಪಿ.ಜಿ.ಜ್ಯೋತಿ

17 Mar 2018, 06:05 pm

ಖಾಲಿ ಜೋಳಿಗೆ

ಬರೆದು ಸವೆದ ಲೇಖನಿಯಲ್ಲಿ
ಪದಗಳೇ ಹುಟ್ಟುತ್ತಿಲ್ಲ ಯಾಕೋ
ಕರಗಿ ಹೋಗಿವೆ ಕತ್ತಲ ಬದುಕಿನೊಳಗೆ
ಕೊರಗಿ ಸೊರಗಿವೆ ಕೃಶ ದೇಹದೊಳಗೆ.

ನಿನ್ನ ಇಂಚಿಂಚು ದೇಹವನು
ಜಾಲಾಡಿ ಹುಡುಕಿ ಹೊಸ ಪದಗಳ
ಬಸಿದು ಬರೆದೆನಂದು ನೂರಾರು
ಪ್ರಣಯ ಪ್ರೇಮ ಕವಿತೆ.
ನನ್ನ ಮನದಾಸೆ ದಾಹವನು
ತಾಳಲಾರದೆ ಕುಗ್ಗಿ ಕುಸಿದೆನು ಇಂದು
ಬರೆಯಲಾರದೆ ಕಿರು ಸಾಲೊಂದರಲ್ಲೇ ನಾ ಸೋತೆ.

ಹಳಸಲು ಪದಗಳಷ್ಟೇ ಉಳಿದಿವೆ
ಈ ಬಡ ಕವಿಯ ಹರಕು ಜೋಳಿಗೆಯಲ್ಲಿ,
ಹೊಸ ಪದಗಳ ಕಾಮನಬಿಲ್ಲು ಕರಗಿದೆ
ಸುಂದರಿಯ ಅನುಪಸ್ಥಿತಿಯಲ್ಲಿ.
ಗಂಟಲು ಕಟ್ಟಿದೆ ವಸಂತದಲ್ಲೂ ಕೋಗಿಲೆಗೆ,
ಗರಿ ಸುಟ್ಟಿದೆ ಆಡುತ್ತಿದ್ದ ಗಂಡು ನವಿಲಿಗೆ!

- ಶ್ರೀಗೋ.

17 Mar 2018, 03:37 pm

ಹೂ...ಮಳೆ

ಈ ಸಂಜೆ ತಂಪು ಗಾಳಿಯೊಡನೆ
ಸುರಿದ ಹೂ ಮಳೆ!!
ನನ್ನೊಲವ ರಾಗದೊಡನೆ ಬೆರೆತು
ನಗುವ ಹೂ ಮಳೆ!!

ಹೂ ಮಳೆ ಬದುಕೊಂದು‌ ಹೂ ಮಳೆ
ಕಾಯದೇ ತಾ ಸುರಿದ ಹೂ ಮಳೆ!!

ನಿನ್ನೆಯವರೆಗೂ ಬರದೇ ಮುನಿದು
ಕುಳಿತು ಹೂ ಮಳೆ!!
ಇಂದು ತಾನಾಗಿಯೇ ಒಲಿದು
ಬಂದ ಹೂ ಮಳೆ!!

ಹೂ ಮಳೆ ಎಲ್ಲೆಲ್ಲೂ ಹೂಮಳೆ
ಕಾಯದೇ ತಾ ಸುರಿದ ಹೂ ಮಳೆ!!

ನಿರಾಸೆಯ ಈ ಬದುಕು ಕಂಡ
ಚೆಲುವ ಹೂ ಮಳೆ!!
ಆಸೆಯ ಬಳ್ಳಿಯಲ್ಲಿ ಅರಳಿದ
ಕೂಸು ಹೂ ಮಳೆ!!

ಹೂ ಮಳೆ ಭೂ ಸ್ವರ್ಗ ಹೂ ಮಳೆ
ಕಾಯದೇ ತಾ ಸುರಿದ ಹೂ ಮಳೆ!!

- ಪಿ.ಜಿ.ಜ್ಯೋತಿ

17 Mar 2018, 02:55 pm

ಗಾಜಿನ ಮನೆಯ ಸಂಭ್ರಮ

ಗಾಜಿನ ಮನೆಯಲ್ಲಿ
ಸೋಜಿಗ ನಲ್ಲನೇ!!
ಎಲ್ಲಿಯೇ ನೋಡಲಿ
ನಾ ಕಾಣುವೆ ನಿನ್ನನೇ!!

ಓಡುವ ಮೋಡದಂತೆ
ಮಿಂಚುವ ಮಿಂಚಿನಂತೆ!!
ಹರಿಯುವ ಜಲದಂತೆ
ಸರಿಯುವ ಕಾಲದಂತೆ!!

ನೀ ಕಾಣುವಾಗ ನಾನು
ನನ್ನನ್ನೇ ಮರೆತಂತೆ!!
ಸೇರ ಬಂದರೆ ನಾನು
ನೀ ಬೇರೆಲ್ಲೋ ಕಂಡಂತೆ!!

ಸೋಜಿಗವು ವಿಸ್ಮಯವು
ನನ್ನ ನಿನ್ನ ಸಂಗಮವು!!
ಸುಂದರವು ಸಂತಸವು
ಗಾಜಿನ ಮನೆಯ ಸಂಭ್ರಮವು!!

- ಪಿ.ಜಿ.ಜ್ಯೋತಿ

17 Mar 2018, 01:52 pm

ಬದುಕ ಇರುಳು

ಯಾವ ಹಣತೆಯ ಹಚ್ಚಿ
ಬದುಕ ಇರುಳನು ಕಳೆವೆ!!
ಹುಟ್ಟು ಕುರುಡನು ನಾನು
ಬೆಳಕ ಕಾಣದೇ ಇರುವೆ!!

ಬದುಕ ಬಣ್ಣಗಳೆಲ್ಲ
ಕಣ್ಣ ಒಳಗಡೆ ಮಾಸಿ!!
ಕತ್ತಲೆನ್ನುವ ವರವ
ಹರುಷದಿಂದಲೇ ಸೂಸಿ!!

ಯಾರ ನೆರಳನು ಅಳಿಸಿ
ಯಾರ ಕೊರಳಲಿ ಇಡುವೆ!!
ಸುಡುವ ಕನಸಿಗೂ ಬಣ್ಣ
ಕಾಣಲರಿಯದೇ ನಗುವೆ!!

ಯಾವ ಸೂರ್ಯನೂ ಇಲ್ಲ
ಬೆಳಕ ಹರಿಸಲು ಇಲ್ಲಿ!!
ಇರುಳು ಕವಿದಿಹ ಜಗಕೆ
ಕಣ್ಣು ಕಾಣುವುದಿಲ್ಲ!!

- ಪಿ.ಜಿ.ಜ್ಯೋತಿ

17 Mar 2018, 01:35 pm

ಸ್ವಾಗತವು ನಿನಗೆ ಹೊಸ ವರುಷ. . .

ಬಂದಿದೆ ಯುಗಾದಿ ಪ್ರತಿ ವರುಷದಂತೆ,
ತಂದಿದೆ ಮನೆ-ಮನದಿ ಹರುಷದಾ ಸಂತೆ,
ಈ ದಿನದ ಬೇವು-ಬೆಲ್ಲದಾ ಬೆಸುಗೆ,
ಬಾಳಲ್ಲಿ ತರಲಿ ಮಧುರ ಭಾವನೆಗಳಾ ಹೂ ನಗೆ,
ಕೂಡಿ ಸ್ವಾಗತಿಸಿ ವಿಳಂಬಿ ಸಂವತ್ಸರ,
ಕಳೆಯೋಣ ನಮ್ಮಲ್ಲಿರುವ ಮದ-ಮತ್ಸರ,

ಸರ್ವರಿಗೂ ಹೊಸ ವರುಷದಾ ಶುಭ ಕಾಮನೆಗಳು

----- ತಿಪ್ಪೇಸ್ವಾಮಿ -----

- tippu

17 Mar 2018, 01:26 pm

ಯುಗಾದಿ ಹಬ್ಬ

ಆರಂಭ ನವಯುಗದ ಶುಭಾರಂಭ
ವಸಂತನೆಂಬ ಋತು ದೈವ ಧರೆಗಿಳಿದ ಸಂದರ್ಭ..
ಅಬ್ಬಬ್ಬಾ ಎಂಥ ಜೀವಕಳೆ ಜಗದ ತುಂಬ
ಚೈತ್ರನೆಂಬ ಋತುರಾಜ ಧರೆಗೆ ಮುತ್ತಿಟ್ಟ ಸಂದರ್ಭ.
ಗಿಡ ಮರಗಳ ತುಂಬ
ಹಸಿರು ಬೆಳಕಿನ ಹಬ್ಬ..
ಮನೆ ಮನಗಳ ತುಂಬ
ಹೊಸ ವರ್ಷದ ಹಬ್ಬ.. " ಪ "

ಕೂಹೂ ಕೂಹೂ ಎಂದು ಕೋಗಿಲೆ
ಹಾಡುತ ನಲಿಯುತಿದೆ ಮಾಮರದ ಮೇಲೆ..
ಹೂವು ಹೂವಿನ ಒಲವಿನ ಕೆನ್ನೆಯ ಮೇಲೆ
ಪೋಣಿಸುತಿದೆ ದುಂಬಿ ಸಿಹಿಮುತ್ತಿನ ಸರಮಾಲೆ..
ಸಂತಸದಿಂದ ರವಿ ಕುಣಿದು ಬಂದ ಕೂಡಲೇ
ಹೊಂಬಣ್ಣದ ಚಿತ್ತಾರ ಬಾನಂಗಳದ ಮೇಲೆ..
ಬಿಸಿಕಿರಣ ಮೈಮನ ಸೋಕುವ ಜೊತೆಯಲ್ಲೇ
ತೇಲಿಬರುತಿದೆ ತಂಗಾಳಿಯ ಹಿತವಾದ ಅಲೆ..

ತೂಗುತಿದೆ ಮನೆಮನದ ಬಾಗಿಲ ಮೇಲೆ
ಬೇವುಮಾವಿನ ತೋರಣ ಎಂಬ ಉಲ್ಲಾಸದ ಉಯ್ಯಾಲೆ..
ಒಲವಿನ ರಂಗೋಲಿ, ನಲಿವಿನ ಓಕುಳಿಯ ಮೇಲೆ
ಬರೆದಿದೆ ತನುಮನ ಹೊಸ ಕನಸುಗಳ ಓಲೆ..
ಎಣ್ಣೆಯ ಮಜ್ಜನ ಸರಿಸಿತು ನೋವಿನ ಕೊಳೆ
ಹೋಳಿಗೆ ಹೂರಣ ಸುರಿಸಿತು ಪ್ರೀತಿಸ್ನೇಹದ ಮಳೆ.
ಕಿರುನಗೆಯಲಿ ಮಿನುಗುವ ಶಶಿಯ ದರ್ಶನ ಪಡೆದ ಮೇಲೆ
ಕಳಚಿ ದೂರವಾಯಿತು ಮನುಜನ ಪಾಪದ ಬಲೆ..
ಸೃಷ್ಟಿಯಲಿ ಅಡಗಿದೆ ಸಿಹಿಕಹಿಯ ಸೆಲೆ
ಬೇವುಬೆಲ್ಲ ಬೆರೆತರೇನೇ ಬದುಕಿಗೊಂದು ಬೆಲೆ..

- ಸುರೇಶ್ ಟಿ ವಿ

17 Mar 2018, 12:53 pm

ಮತ್ತೆ ಮಳೆಯಾಗಿದೆ

ಮೆತ್ತನೆ‌ ಬೀಸುತ ಗಾಳಿ
ಮುಗಿಲಲಿ ಮೋಡದ ಗುಂಪು.....

ಸುತ್ತಲೂ ಗುಡುಗಿನ ದಾಳಿ
ಇಳೆಯಲಿ ಮಳೆಹನಿ ಕಂಪು...

ಹಚ್ಚ ಹಸುರಿನ ಎಲೆಯಲಿ
ಮುತ್ತಂತೆ ಉದುರಿದೆ ಮಳೆಹನಿ...

ಬೆಚ್ಚಗೆ ಮಲಗಿದ್ದ ಭುವಿಯಲಿ
ಮತ್ತೆ ಕೇಳಿದೆ ನವಿಲದನಿ....

.....ಕುಶಿ...

- sharin rao

17 Mar 2018, 12:02 pm

ಯುಗಾದಿ...

ಸೂರ್ಯನು ಬೆಳಗನು
ಹೊತ್ತು ತಂದನು
ಮತ್ತೆ ಹೊಸ ವರುಷದಲಿ..!
ಮನೆ ಮನೆಗಳು
ಮನ ಮನಗಳು
ಮತ್ತೆ ಯುಗಾದಿಯ ಹರುಷದಲಿ...!

ಬಾಲೆಯರು ಹಾಕಿದ
ರಂಗೋಲಿ ಬಣ್ಣಗಳು
ರಂಗೇರಿದೆ ಮನೆಯಂಗಳದಿ.!
ಹಲವು ಹಕ್ಕಿಗಳ
ಚಿಲಿಪಿಲಿ ನಾದವು
ಗುಂಗೇರಿದೆ ಬಾನಂಗಳದಿ..!

ಮಧವನು ಸವಿದಿಹ
ದುಂಬಿಯ ಧ್ವನಿಯದು
ಝೆಂಕರಿಸಿದೆ ಹೊಸ ಹಾಡಿನಲಿ..!
ಚೈತ್ರದ ಚೆಲವಲಿ
ಬೆರೆತಿಹ ಪ್ರಾಣಿಗಳು
ಹೂಂಕರಿಸಿವೆ ಹೊಸ ಕಾಡಿನಲಿ..!

ಕೊಂಬೆಯ ಮರದಲಿ
ಕುಳಿತಿಹ ಕೋಕಿಲ
ಕೂಗಿದೆ ಅದು ಹೊಸ ರಾಗದಲಿ..!
ಹೊಸ ಚಿಗುರಿಗೆ ಜಾಗವ ಕೊಟ್ಟು
ಸದ್ದಿಲ್ಲದೆ ಮೆಲ್ಲನೆ ಉದಿರಿವೆ
ಒಣ ಎಲೆಗಳು ಪ್ರಾಣ ತ್ಯಾಗದಲಿ..!

ಸವಿಯುವ ಬೇವು-ಬೆಲ್ಲ
ಕಹಿ ಬೇವಿನ ಜೊತೆ ಬೆಲ್ಲವ ಬೆರೆಸಿ..!
ಇರುಳಿನ ಹೊತ್ತಲಿ ದೀಪವ ಹಚ್ಚಿ
ಕತ್ತಲ ದೂಡುವ ಜ್ಯೋತಿಯ ಉರಿಸಿ..!
- ಸಿದ್ದು ಗುಂಡ

- - ಸಿದ್ದು ಕನ್ನಡಿಗ

17 Mar 2018, 11:34 am